ಕಾವೇರಿ ನದಿಯಲ್ಲಿ ಮುಳುಗಿ ಇಂಜಿನಿಯರ್ ಸಾವು

ಮೈಸೂರು ; ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಇಂಜಿನಿಯರ್ ಒಬ್ಬರು ಕಾವೇರಿ ನದಿಯಲ್ಲಿ ಈಜಲು ಹೋಗಿ ನೀರು ಪಾಲಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಟಿ,ನರಸೀಪುರ ತಾಲ್ಲೂಕಿನ ತಲಕಾಡು ಬಳಿಯ ಕಾವೇರಿ ನಿಸರ್ಗ ಧಾಮದ ಬಳಿ ಈ ಘಟನೆ ಸಂಭವಿಸಿದ್ದು, ಕಲಬುರಗಿ ಜಿಲ್ಲೆಯ ಚಂದ್ರಶೇಖರ ಎಂಬುವರ ಮಗ ಧರ್ಮರಾಜ್ (24)ಮೃತಪಟ್ಟ ಇಂಜಿನಿಯರ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ರಾಜಾಜಿನಗರದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಧರ್ಮರಾಜ್ ವಾರಾಂತ್ಯದ ರಜೆ ಹಿನ್ನೆಲೆ ತಮ್ಮ 10 ಮಂದಿ ಸ್ನೇಹಿತರೊಡನೆ ಪ್ರವಾಸಕ್ಕೆಂದು ಮೈಸೂರಿನ ಭಾಗಕ್ಕೆ ಬಂದಿದ್ದರು.
ಮೊದಲು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು, ನಂತರ ತಲಕಾಡಿಗೆ ಬಂದಿದ್ದರು. ನಿಸರ್ಗಧಾಮದ ಕಾವೇರಿ ನದಿಯಲ್ಲಿ ಈಜಾಡಲು ಹೋಗಿದ್ದಾಗ ನೀರಿನಲ್ಲಿ ಮುಳುಗಿದ್ದಾರೆ.
ಸ್ನೇಹಿತರು ಹುಡುಕಾಟ ನಡೆಸಿದರೂ ಕಾಣಿಸಿಲ್ಲ. ನಂತರ ಅಲ್ಲೆ ದೋಣಿ ನಡೆಸುತ್ತಿದ್ದ ಸ್ಥಳೀಯರು ಮುಳುಗುತ್ತಿದ್ದ ಯುವಕನನ್ನು ಮೇಲೆ ಎತ್ತಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯುವಕ ಮೃತಪಟ್ಟಿರುವ ಬಗ್ಗೆ ವೈದ್ಯರು ಖಚಿತಪಡಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ, ಯುವಕನ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ತಲಕಾಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




