ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರುವ ಸರ್ಕಾರದ ಕ್ರಮಕ್ಕೆ ಬಿಷಪ್ ಡಾ.ವಿಲಿಯಂ ವಿರೋಧ

ಮೈಸೂರು: ರಾಜ್ಯ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಮತಾಂತರ ನಿಷೇಧ ಕಾಯ್ದೆಗೆ ಮೈಸೂರಿನ ಬಿಷಪ್ ಡಾ.ಕೆ.ಎ.ವಿಲಿಯಂ ವಿರೋಧ ವ್ಯಕ್ತಪಡಿಸಿದ್ದಾರೆ. ಮತಾಂತರ ಕಾಯ್ದೆಯಿಂದ ನಮಗೆ ಯಾವುದೇ ಭಯ ಇಲ್ಲ. ನಾವು ಆ ರೀತಿಯ ತಪ್ಪುಗಳನ್ನು ಮಾಡ್ತಿಲ್ಲ. ನಾವು ಯಾರನ್ನು ಬಲವಂತವಾಗಿ ಮತಾಂತರ ಮಾಡುತ್ತಿಲ್ಲ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾಜ ಸೇವೆ ಕ್ರೈಸ್ತ ಧರ್ಮದ ಮೂಲ ಉದ್ದೇಶ. ನಾವು ಯಾರನ್ನು ಬಲವಂತವಾಗಿ ಮತಾಂತರ ಮಾಡಿಲ್ಲ. ಏನೂ ಇಲ್ಲದೇ ಅಪವಾದ, ತೊಂದರೆ ಮಾಡೊದು ಸರಿಯಲ್ಲ. ರಾಜ್ಯದಲ್ಲಿ ಈ ಬಿಲ್ ನ ಅಗತ್ಯತೆ ಇಲ್ಲ. ಆ ರೀತಿ ಬಲವಂತ ಮತಾಂತರ ಮಾಡಿದ್ರೆ ಕಾಯ್ದೆ ತರದೇ ಅಂತವರ ವಿರುದ್ಧ ಕ್ರಮಕೈಗೊಳ್ಳಿ. ಆದರೆ ಕಾಯ್ದೆ ದುರುಪಯೋಗ ಪಡಿಸಿಕೊಂಡು ತೊಂದರೆ ಮಾಡುವ ಸಾಧ್ಯತೆ ಇದೆ ಎಂದರು.
ಕಾಯ್ದೆಯಿಂದ ಒಂದು ಧರ್ಮಕ್ಕೆ ತೊಂದರೆ ಮಾಡಬಾರದು ಇದು ಕೇವಲ ಕ್ರೈಸ್ತ ಧರ್ಮಕ್ಕೆ ಮಾತ್ರ ಸಂಬಂಧಿಸಿದ್ದಲ್ಲ. ಈ ಬಗ್ಗೆ ಹೋರಾಟ ಕುರಿತು ಧರ್ಮಾಧ್ಯಕ್ಷರ ಒಕ್ಕೂಟ ತೀರ್ಮಾನ ಮಾಡುತ್ತೆ. ನಾವು ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಸಿಎಂ ಭೇಟಿ ಮಾಡಿಲ್ಲ ಎಂದು ತಿಳಿಸಿದರು.
ನಮ್ಮ ಸಮುದಾಯಕ್ಕೆ ಸ್ಮಶಾನ, ಇತರೆ ಸವಲತ್ತುಗಳನ್ನ ಕೇಳಲು ಹೋಗಿದ್ದೆವು. ಮತಾಂತರ ಕಾಯ್ದೆಯಿಂದ ನಮಗೆ ಯಾವುದೇ ಭಯ ಇಲ್ಲ ಎಂದರು. ಕ್ರಿಸ್ಮಸ್ ಆಚರಣೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ ಎಂದರು.
ಕೊರೊನಾ ಆತಂದಿಂದಾಗಿ ಕಳೆದ ಬಾರಿ ಸರಳವಾಗಿ ಕ್ರಿಸ್ಮಸ್ ಆಚರಿಸಲಾಗಿತ್ತು. ಈ ಬಾರಿ ಕೊರೊನಾ ರೂಪಾಂತರ ಓಮಿಕ್ರಾನ್ ಭೀತಿಯ ನಡುವೆ ಕ್ರಿಸ್ಮಸ್ ಆಚರಣೆ ಮಾಡಬೇಕಿದೆ ಎಂದು ಬಿಷಪ್ ಡಾ,ವಿಲಿಯಂ ಹೇಳಿದರು.




