ಜಗಳೂರು ನ್ಯಾಯಾಲಯದ ಆವರಣದಲ್ಲಿ ಕೊಲೆಗೆ ಯತ್ನ…!

ದಾವಣಗೆರೆ: ಕೌಟುಂಬಿಕ ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿ ಮೇಲೆ ಕೋರ್ಟ್ ಆವರಣದಲ್ಲಿಯೇ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಲು ಯತ್ನಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ನಡೆದಿದೆ.
ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದ 35 ವರ್ಷದ ಮಂಜುನಾಥ ಮೇಲೆ ಹಲ್ಲೆ ನಡೆದಿದ್ದು, ಕುತ್ತಿಗೆಯನ್ನ ಕೊಯ್ಯಲು ಯತ್ನಿಸಲಾಗಿದೆ. ಹರಪನಹಳ್ಳಿ ತಾಲ್ಲೂಕಿನ ಹಿರೇಮೇಗಳಗೆರೆ ಗ್ರಾಮದ 30 ವರ್ಷದ ಮಲ್ಲಿಕಾರ್ಜುನ ಚಾಕುವಿನಿಂದ ಕುಯ್ದ ವ್ಯಕ್ತಿ.
ಅಕ್ಕನ ಗಂಡನಾದ ಮಂಜುನಾಥನ ವಿರುದ್ಧ ಜೀವನಾಂಶ ಕೋರಿ ಜಗಳೂರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೇ ವೈಷಮ್ಯದಿಂದ ವಕೀಲರು ಹಾಗೂ ಕಕ್ಷಿದಾರರ ಸಮ್ಮುಖದಲ್ಲಿ ಕೊಲೆಗೆ ಯತ್ನ ನಡೆಸಲಾಗಿದೆ. ಗಾಯಾಳುವಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಸುಮಾರು 45 ನಿಮಿಷ ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಹಾಗೂ ಆಂಬುಲೆನ್ಸ್ ಬಂದಿರಲಿಲ್ಲ.
ನಂತರ ಸಿಪಿಐ ಮಂಜುನಾಥ್ ಪಂಡಿತ್ ಹಾಗೂ ಡಿವೈಎಸ್ಪಿ ಕನ್ನಿಕಾ ಸಕ್ರಿವಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನ ನಡೆಸಿದ್ದು, ಗಾಯಾಳುವನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




