ಮಧುಮಲೈ ಅರಣ್ಯದಲ್ಲಿ ಸೆರೆಸಿಕ್ಕ ಹುಲಿ ಆರೋಗ್ಯದಲ್ಲಿ ಚೇತರಿಕೆ

ಮೈಸೂರು : ಅಕ್ಟೋಬರ್ 21ರಂದು ತಮಿಳುನಾಡಿನ ಮಧುಮಲೈನಲ್ಲಿ ಸೆರೆ ಹಿಡಿಯಲಾಗಿದ್ದ ಟಿ-23 ಹೆಸರಿನ ಹುಲಿಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಮಧುಮಲೈನಲ್ಲಿ ಸೆರೆ ಹಿಡಿಯಲಾದ ಟಿ-23 ಹುಲಿಗೆ ಮೈಸೂರಿನ ಮೃಗಾಲಯದ ಅಧೀನದಲ್ಲಿರುವ ಕೂರ್ಗಳ್ಳಿ ಸಮೀಪದ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅದರ ತೂಕ ಅಂದಾಜು 200 ಕೆಜಿಯಷ್ಟು ಆಗಿದೆ. ಮಧುಮಲೈನಲ್ಲಿ ಸೆರೆ ಹಿಡಿಯಲಾದ ಗಂಡು ಹುಲಿಯು ಟೆರಿಟೆರಿ ಫೈಟ್ನಲ್ಲಿ ಮತ್ತು ಇತರೆ ಕಾರಣಗಳಿಂದ ಗಂಭೀರವಾಗಿ ಗಾಯಗೊಂಡಿತ್ತು. ಸುಮಾರು 7 ರಿಂದ 8 ಕಡೆ ಗಾಯಗಳಾಗಿದ್ದವು. ಅವುಗಳೆಲ್ಲ ಬಹುತೇಕ ವಾಸಿಯಾಗಿವೆ.
ಪ್ರತಿದಿನ ಟಿ-23 ಹುಲಿಗೆ ಡ್ರೆಸ್ಸಿಂಗ್ ಮಾಡಲಾಗುತ್ತಿದೆ. ಜೊತೆಗೆ ಈ ಹುಲಿಯು ಸಿಬ್ಬಂದಿಯ ಆಜ್ಞೆಯನ್ನು ನಿಧಾನವಾಗಿ ಪಾಲಿಸುತ್ತಿದೆ. ಹುಲಿಯ ಮಲವನ್ನು ಪರೀಕ್ಷಿಸಿದ್ದು ಅದಕ್ಕೆ ಯಾವುದೇ ರೀತಿಯ ಸೋಂಕು ತಗುಲಿಲ್ಲ ಎಂದು ತಿಳಿದು ಬಂದಿದೆ.
ಇನ್ನೂ ಹುಲಿಯ ಕಣ್ಣಿನ ಭಾಗದ ಗಾಯವು ದೀರ್ಘ ಕಾಲದ ಸಮಸ್ಯೆಯಾಗಿದೆ. ಹುಲಿಯಲ್ಲಿ ಇನ್ನೂ ಕಾಡಿನ ನಡವಳಿಕೆ ಇರುವುದರಿಂದ ಅದನ್ನು ಚಿಕ್ಕ ಬೋನ್ನಲ್ಲಿ ಇರಿಸಲಾಗಿದೆ.
ಹುಲಿಯು ಚೆನ್ನಾಗಿ ಊಟ ಮಾಡುತ್ತಿದೆ. ವಾರದ 5 ದಿನಗಳಲ್ಲಿ 10 ಕೆಜಿ ದನದ ಮಾಂಸವನ್ನು ನೀಡಲಾಗುತ್ತಿದೆ. ಹುಲಿಯು ಚೆನ್ನಾಗಿ ನಿದ್ದೆ ಮಾಡುತ್ತಿದೆ. ಅದು ಕುಳಿತುಕೊಳ್ಳುವ ಭಂಗಿ ಕೂಡ ಸುಧಾರಿಸಿದೆ. ಹಾಗಿದ್ದರೂ ಸಹ ಹುಲಿಯ ಆರೋಗ್ಯದ ದೃಷ್ಟಿಯಿಂದ ಇನ್ನೂ 5-6 ತಿಂಗಳುಗಳ ಆರೈಕೆಯ ಅಗತ್ಯವಿದೆ.




