ವಿಶ್ವನಾಥ್, ಮುನೀಶ್ ಮೌದ್ಗಿಲ್ ಅವರೇ ಚೈನ್ ಹಿಡಿದು ಸರ್ವೇ ಮಾಡಲಿ: ಸಾರಾ ಮಹೇಶ್ ಸವಾಲ್

ಮೈಸೂರು : ಎಂಎಲ್ಸಿ ಹೆಚ್.ವಿಶ್ವನಾಥ್, ಮುನೀಶ್ ಮೌದ್ಗಿಲ್, ರೋಹಿಣಿ ಸಿಂಧೂರಿ ಅವರೇ ಚೈನ್ ಹಿಡಿದು ಸರ್ವೇ ಮಾಡಲಿ, ನಾನು ಯಾವುದೇ ಕಾರಣಕ್ಕೂ ಹೆದರುವುದಿಲ್ಲ ಎಂದು ಶಾಸಕ ಸಾ.ರಾ.ಮಹೇಶ್ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಾರಾ ಮಹೇಶ್ ಅವರು, ರೋಹಿಣಿ ಸಿಂಧೂರಿಯಾಗಲಿ, ಮುನೀಶ್ ಮೌದ್ಗಿಲ್ ಆಗಲಿ ನನ್ನನ್ನು ಬ್ಲಾಕ್ ಮೇಲ್ ಮಾಡಿ ಹೆದರಿಸಲು ಸಾಧ್ಯವಿಲ್ಲ. ನಾನು ಯಾವುದೇ ಬ್ಲಾಕ್ ಮೇಲ್ಗೂ ಹೆದರುವುದಿಲ್ಲ. ಪ್ರಾಮಾಣಿಕತೆ ಮತ್ತು ಭ್ರಷ್ಟಾಚಾರದ ನಡುವೆ ನಡೆಯುತ್ತಿರುವ ಹೋರಾಟವನ್ನು ನಾನು ಇಲ್ಲಿಗೆ ನಿಲ್ಲಿಸುವುದಿಲ್ಲ. ನನ್ನ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇನೆ. ನನ್ನ ಇದುವರೆಗಿನ ಸಾರ್ವಜನಿಕ ಬದುಕಿನಲ್ಲಿ ಎಂದೂ ಕೂಡ ಕಿಕ್ ಬ್ಯಾಕ್ ಪಡೆದಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪಗಳಲ್ಲಿ ಒಂದನ್ನು ಸಾಬೀತು ಮಾಡಿದರೂ ಕೂಡ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಸಾರ್ವಜನಿಕ ಬದುಕಿನಿಂದ ದೂರವಾಗುತ್ತೇನೆ. ಬೇರೆಯವರನ್ನು ಬ್ಲಾಕ್ ಮೇಲ್ ಮಾಡಬಹುದು, ಆದರೆ ನನ್ನನ್ನು ಬ್ಲಾಕ್ ಮೇಲ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ನಾನು ಗೊಮ್ಮಟೇಶ್ವರನ ಭಕ್ತ, ಆಂಜನೇಯನ ಭಕ್ತ. ಆದ್ದರಿಂದ ಸರ್ವೇ ಕಮಿಷನರ್ ಆದೇಶವನ್ನು ಸ್ವಾಗತ ಮಾಡುತ್ತೇನೆ. ರೋಹಿಣಿ ಸಿಂಧೂರಿ ಅವರು ಸಾ.ರಾ.ಚೌಲ್ಟ್ರಿ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ, ಅದು ಗೋಮಾಳ ಅಂತ ಹೇಳಿದ್ದರು.
ನಾನೇ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಧರಣಿ ಮಾಡಿ ತನಿಖೆಗೆ ಆಗ್ರಹಿಸಿದ್ದೆ. ನನ್ನ ಒತ್ತಡ, ಹೋರಾಟದ ಮೇಲೆ ಸರ್ವೇ ಕಾರ್ಯ ನಡೆದಿತ್ತು. ಈಗ ಸರ್ವೇ ಆಯುಕ್ತರು ಒಂದು ಪತ್ರ ಬರೆದಿದ್ದಾರೆ. ಜೆಡಿಎಲ್ಆರ್ 3-4 ಜಿಲ್ಲೆಗಳ ಹೆಡ್ ಆಗಿರುತ್ತಾರೆ. ಪ್ರಾದೇಶಿಕ ಆಯುಕ್ತರಿಗೆ ಜ್ಯುಡಿಷಿಯಲ್ ಪವರ್ ಇರುತ್ತದೆ. ಆರ್ಟಿಸಿ ಎಲ್ಲಿ ತೆಗೆದರೂ ದಾಖಲೆಗಳು ಸಿಗುತ್ತವೆ. ನೀವೊಬ್ಬ ಪ್ರಾಮಾಣಿಕ ಅಧಿಕಾರಿ. ಆದ್ದರಿಂದಲೇ ರೈತರ ಸಾಲ ಮನ್ನಾಕ್ಕೆ ನಿಮ್ಮನ್ನು ನೇಮಿಸಿದ್ದರು. 50 ಸಾವಿರ ಅರ್ಜಿ ಇಟ್ಟುಕೊಂಡು ಕುಳಿತಿದ್ದೀರಿ. ಖಾಸಗಿ ಎರಡೂವರೆ ಲಕ್ಷ, ಸರ್ಕಾರಿ ಎರಡೂವರೆ ಲಕ್ಷ ಸೇರಿ ಒಟ್ಟು 5 ಲಕ್ಷ ಅರ್ಜಿ ಬಾಕಿ ಇಟ್ಟುಕೊಂಡಿದ್ದೀರಿ. ನೀವೇ ಬನ್ನಿ, ಹೂಗುಚ್ಛ ಹಿಡಿದುಕೊಂಡು ಸ್ವಾಗತಿಸುತ್ತೇನೆ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ. ಚೌಲ್ಟ್ರಿ ಜಾಗದಲ್ಲಿ ಒಂದು ಗುಂಟೆ ಒತ್ತುವರಿ ಆಗಿದ್ದರೂ ಅದನ್ನು ರಾಜ್ಯಪಾಲರಿಗೆ ಬರೆದುಕೊಡುವೆ ಎಂದು ತಿಳಿಸಿದರು.
ಒತ್ತುವರಿ, ಗೋಮಾಳ ಅಥವಾ ಒಂದೇ ಒಂದು ಗುಂಟೆ ಖರಾಬು ನಿಮ್ಮ ಜಾಗದಲ್ಲಿದ್ದರೆ ತೋರಿಸಿ. ಆರು ಬಾರಿ 8 ವರ್ಷದಿಂದ ಅಲ್ಲೇ ಇದ್ದೀರಲ್ಲ, ಎಷ್ಟು ಸಾಗುವಳಿ ದಾಖಲಿ ಕೊಟ್ಟಿದ್ದೀರಿ ಮುನೀಶ್ ಮೌದ್ಗಿಲ್ ಅವರೇ? ನಾನು ನನ್ನ ಹೆಂಡತಿ, ಇಬ್ಬರು ಮಕ್ಕಳು, ನನ್ನ ಆಸ್ತಿ ಘೋಷಣೆ ಮಾಡಿದ್ದೀನಿ. ನಿಮ್ಮ ಶಿಷ್ಯೆ ಇದ್ದಾರಲ್ಲ, ಅವರು ಕೆಲಸಕ್ಕೆ ಸೇರಿ 12 ವರ್ಷ ಆಯ್ತು. ರೋಹಿಣಿ ಸಿಂಧೂರಿ ತಂದೆ, ತಾಯಿ, ಪತಿ ಹೆಸರಲ್ಲಿ ಆಸ್ತಿ ಎಷ್ಟಿದೆ ಎಂದು ಘೋಷಿಸಿದ್ದಾರಾ ಎಂದು ಸಾರಾ ಮಹೇಶ್ ಮುದ್ಗಿಲ್ಗೆ ಪ್ರಶ್ನಿಸಿದರು.
