ಚಾಮುಂಡಿ ಬೆಟ್ಟದ ಭೂಕುಸಿತ ಪ್ರದೇಶಕ್ಕೆ ಸಚಿವ ಸಿ ಸಿ ಪಾಟೀಲ್ ಭೇಟಿ ಪರಿಶೀಲನೆ

ಮೈಸೂರು: ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆ ಜಿಯೋ ಟ್ರೇಲ್ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದಲ್ಲಿ ಭೂಕುಸಿತದ ದುರಸ್ತಿ ಕಾಮಗಾರಿ ಮಾಡಲಾಗುತ್ತದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸಿ ಸಿ ಪಾಟೀಲ್ ತಿಳಿಸಿದರು.
ಚಾಮುಂಡಿ ಬೆಟ್ಟದಲ್ಲಿ ನಂದಿಗೆ ತೆರಳುವ ರಸ್ತೆಯಲ್ಲಿನ ಭೂ ಕುಸಿತವಾಗಿರುವ ಸ್ಥಳಕ್ಕೆ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಪರಿಶೀಲನೆ ನಡೆಸಿದ ಸಚಿವ ಸಿ.ಸಿ ಪಾಟೀಲ್ ಅಧಿಕಾರಿಗಳು ಹಾಗೂ ತಜ್ಞರಿಂದ ಮಾಹಿತಿ ಸಂಗ್ರಹಿಸಿದರು. ಸ್ಥಳ ವೀಕ್ಷಣೆ ಬಳಿಕ ಮಾತನಾಡಿದ ಸಚಿವ ಸಿಸಿ ಪಾಟೀಲ್, ಜಿಯೋ ಟ್ರೇಲ್ ತಂತ್ರಜ್ಞಾನದ ಮೂಲಕ ಚಾಮುಂಡಿ ಬೆಟ್ಟದ ದುರಸ್ತಿ ಕಾಮಗಾರಿ ಮಾಡಲಾಗುತ್ತದೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಹೆಚ್ಚು ವಿವರ ನೀಡುವಂತಿಲ್ಲ. ಮಣ್ಣನ್ನು ಹೀರಿಕೊಳ್ಳುವ ಸಾಮರ್ಥ್ಯ ಮೀರಿ ತೇವಾಂಶ ಹೆಚ್ಚಾದ ಕಾರಣ ರಸ್ತೆ ಕುಸಿದಿದೆ.
ತಜ್ಞರ ವರದಿಯಂತೆ ರಸ್ತೆಯನ್ನ ಆಧುನಿಕ ತಂತ್ರಜ್ಞಾನ ಬಳಸಿ ರಿಪೇರಿ ಮಾಡುತ್ತೇವೆ. ಎಲ್ಲೆಲ್ಲಿ ರಸ್ತೆ ಕುಸಿಯಬಹುದು ಎನ್ನುವುದರ ಬಗ್ಗೆ ಚಾಮುಂಡಿ ಬೆಟ್ಟದಲ್ಲಿ ಸರ್ವೆ ಮಾಡಿಸಿಲ್ಲ ಎಂದರು. ಬಿಟ್ ಕಾಯಿನ್ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಸಚಿವ ಸಿ.ಸಿ ಪಾಟೀಲ್, ಆರೋಪಿಯನ್ನು ಬಂಧಿಸಿದ್ದು ಬಿಜೆಪಿ ಸರ್ಕಾರ. ತನಿಖೆ ಹಂತದಲ್ಲೂ ಯಾವುದೇ ಲೋಪ ಆಗಿಲ್ಲ. ಪ್ರಕರಣವನ್ನು ಸಿಬಿಐಗೆ ವಹಿಸುವುದಾಗಿ ಸಿಎಂ ಈಗಾಗಲೇ ಘೋಷಿಸಿದ್ದಾರೆ.
ಪ್ರಕರಣ ಹಸ್ತಾಂತರ ಸಂದರ್ಭದಲ್ಲೂ ವಿಳಂಬವಾಗಿಲ್ಲ. ಪ್ರಿಯಾಂಕ್ ಖರ್ಗೆ ನಿನ್ನೆ ಪಂಚನಾಮೆ ಸರಿಯಾಗಿ ಮಾಡಿಲ್ಲ ಅಂತ ಆರೋಪ ಮಾಡಿದ್ದರು. ಅವರಿಗೆ ಕೋರ್ಟ್ ದಂಡ ವಿಧಿಸಿದೆ. ಚುನಾವಣೆ ಹತ್ತಿರ ಬಂದಿದೆ ಅಂತ ಕಾಂಗ್ರೆಸ್ ನವರು ಏನೇನೋ ಆರೋಪ ಮಾಡಬಾರದು ಎಂದು ಕಿಡಿಕಾರಿದರು.



