ಬಡಾಯವೆದ್ದು ಗೆದ್ದ ಅಭ್ಯರ್ಥಿಗೆ ಉಪಮೇಯರ್: ಬೆಂಬಲಿಗರನ್ನು ಮೇಯರ್ ಮಾಡಲು ನಾಯಕರ ಪೈಪೋಟಿ

ಧಾರವಾಡ: ಹುಬ್ಬಳ್ಳಿ – ಧಾರವಾಡ ಮಾಹಾನಗರ ಪಾಲಿಕೆಯಲ್ಲಿ ಮೂರನೇ ಬಾರಿಗೆ ಬಿಜೆಪಿ ಅಧಿಕಾರ ಹಿಡಿಯುವುದು ಪಕ್ಕಾ ಆಗಿದೆ. 39 ಸ್ಥಾನಗಳನ್ನು ಗೆಲುವು ಮೂಲಕ ಪಾಲಿಕೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದ್ದು, ಈಗ ಪಾಲಿಕೆಯಲ್ಲಿ ಅಧಿಕಾರಕ್ಕೆ ಏರಲು ಬಿಜೆಪಿ ಪಕ್ಷದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಆದರೆ ಮೇಯರ್ ಸ್ಥಾನಕ್ಕಾಗಿ ಜಿಲ್ಲೆಯ ನಾಲ್ಕು ಬಿಜೆಪಿಯ ನಾಯಕರು ತಮ್ಮ ಬೆಂಬಲಿಗರ ಪರ ಲಾಬಿ ಆರಂಭಿಸಿದ್ದು, ತೀವ್ರ ಪೈಪೋಟಿ ಕಂಡು ಬರುತ್ತಿದೆ. ಇನ್ನೂ ಉಪ ಮೇಯರ್ ಸ್ಥಾನವು ಬಿಜೆಪಿಯಿಂದ ಬಂಡಾಯವೆದ್ದು ಗೆದ್ದಿರು ಅಭ್ಯರ್ಥಿಗೆ ನೀಡುವುದರ ಕುರಿತು ತೀರ್ಮಾಣ ಮಾಡಲಾಗಿದೆ.
ಈಗಾಗಲೇ ಅವಳಿನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಮೀಸಲಾತಿ ಪ್ರಕಟಗೊಡಿದ್ದು, ಮೇಯರ್ ಸ್ಥಾನವು ಹಿಂದುಳಿದ ವರ್ಗ ಎ ಗೆ ಹಾಗೂ ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಹಾಗಾಗಿ ಸದ್ಯ ಮೇಯರ್ ಸ್ಥಾನಕ್ಕೆ ಏರಲು ಅರ್ಹತೆ ಹೊಂದಿರುವ ಸದಸ್ಯರ ಸಂಖ್ಯೆಯು ಬಿಜೆಪಿಯಲ್ಲಿ ಹೆಚ್ಚಾಗಿದೆ. ಆದರೆ ಉಪ ಮೇಯರ್ ಸ್ಥಾನಕ್ಕೆ ಅರ್ಹತೆ ಹೊಂದಿರುವ ಒಬ್ಬರು ಬಿಜೆಪಿಯ ಪಾಲಿಕೆಯ ನೂತನ ಸದಸ್ಯರು ಇಲ್ಲದ ಕಾರಣ ಅನಿವಾರ್ಯವಾಗಿ ಬಿಜೆಪಿ ನಾಯಕರು ಪಕ್ಷದಿಂದ ಬಂಡಾಯವೆದ್ದು ಗೆದ್ದಿರುವ ಪಕ್ಷೇತರ ಸದಸ್ಯೆಗೆ ಉಪಮೇಯರ್ ಸ್ಥಾನ ನೀಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ಹಾಗಾಗಿ ಬಿಜೆಪಿ ಪಕ್ಷದಿಂದ ಬಂಡಾಯ ಎದ್ದು ಪಕ್ಷೇತರ ಅಭ್ಯರ್ಥಿಯಾಗಿ 69 ವಾರ್ಡ್ ಸದಸ್ಯರಾಗಿ ಆಯ್ಕೆಯಾಗಿರುವ ದುರ್ಗಮ್ಮಾ ಬಿಜವಾಡ ಅವರಿಗೆ ಉಪ ಮೇಯರ್ ಸ್ಥಾನ ನೀಡಲು ಬಿಜೆಪಿಯ ನಾಯಕರು ತಿರ್ಮಾನ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದುರ್ಗಮ್ಮಾ ಬಿಜವಾಡ ಪತಿ ಶಶಿಕಾಂತ ಬಿಜವಾಡರನ್ನು ಉಚ್ಚಾಟನೆ ವಾಪಸ್ ಪಡೆದುಕೊಂಡಿರು ಜಿಲ್ಲೆಯ ಬಿಜೆಪಿ ನಾಯಕರು ಮತ್ತೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಪಾಲಿಕೆಯ ಸ್ಥಾನವನ್ನು 40 ಕ್ಕೆ ಏರಿಕೆ ಮಾಡಿಕೊಂಡಿದ್ದಾರೆ.
ತಿಪ್ಪುಣ್ಣ ಮಜ್ಜಗಿ ಪರ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಲಾಬಿ:
ಹುಬ್ಬಳ್ಳಿಯ ವಾರ್ಡ ನಂ 38ರಲ್ಲಿ ತಿಪ್ಪಣ್ಣ ಮಜ್ಜಗಿಯವರ ಎರಡನೇ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಈ ಹಿಂದೆ ಪತ್ನಿ ಆಶ್ವೀನಿ ಮಜ್ಜಗಿಯರು ಕೂಡಾ ಪಾಲಿಕೆ ಸದಸ್ಯಾರಾಗಿದ್ದರು ಜೊತೆಗೆ ಮೇಯರ್ ಸ್ಥಾನವನ್ನು ಅಲಂಕರಿಸಿದ್ದರು. ಇನ್ನೂ ತಿಪ್ಪಣ್ಣ ಮಜ್ಜಗಿಯವರು ಹು-ಧಾ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡಿನಿಂದ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದು, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆಪ್ತರಾಗಿದ್ದಾರೆ. ಹಾಗಾಗಿ ಈಗ ತಿಪ್ಪಣ್ಣ ಮಜ್ಜಗಿಯವರು ಪಾಲಿಕೆಯ ಮೇಯರ್ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ತಮ್ಮ ನಾಯಕರ ಮೂಲಕ ರಣತಂತ್ರವನ್ನು ಹೆಣೆಯುತ್ತಿದ್ದಾರೆ. ಇದಕ್ಕೆ ಜಗದೀಶ ಶೆಟ್ಟರವರು ಬಹುತೇಕ ಸಮ್ಮತಿ ಸೂಚಿಸಿದ್ದು, ತಮ್ಮ ಬೆಂಬಲಿಗನನ್ನು ಮೇಯರ್ ಸ್ಥಾನಕ್ಕೆ ಏರಿಸಲು ಕಸರತ್ತು ನಡೆಸಿದ್ದಾರೆ ಎಂದು ಬಿಜೆಪಿ ಮೂಲಗಳಿಂದ ಕೇಳಿ ಬರುತ್ತಿದೆ. ಜಿಲ್ಲೆಯ ಬಿಜೆಪಿ ಹಿರಿಯ ನಾಯಕರ ಸ್ಥಾನದಲ್ಲಿರುವ ಶೆಟ್ಟರವರು ತಮ್ಮ ಪ್ರಭಾವ ಬಳಿಸಿ ತಿಪ್ಪಣ್ಣ ಮಜ್ಜಗಿಯವರಿಗೆ ಮೇಯರ್ ಪಟ್ಟ ಕಟ್ಟಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈರೇಶ ಅಂಚಗೇರಿ ಪರ ಕೇಂದ್ರ ಸಚಿವ ಜೋಶಿ:
ಧಾರವಾಡ ಗ್ರಾಮೀಣ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ ನಂ 3 ರಿಂದ ಈರೇಶ ಅಂಚಟಗೇರಿಯವರು ಎರಡನೇ ಬಾರಿಗೆ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪಾಲಿಕೆ ಆಡಳಿತ ಅನುಭವ ಕೂಡಾ ಇವರು ಹೊಂದಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಅವರ ಆಪ್ತರಾಗಿದ್ದಾರೆ. ಅಲ್ಲದೆ ಧಾರವಾಡ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯ ಪಾಲಿಕೆ ಸದಸ್ಯರಾದ್ದ ಯಾರೊಬ್ಬರಿಗೂ ಮೇಯರ್ ಸ್ಥಾನ ಸಿಕ್ಕಿಲ್ಲ. ಇದನ್ನೇ ದಾಳವಾಗಿ ಉರುಳಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಅಮೃತ ದೇಸಾಯಿವರ ಮೂಲಕ ಈರೇಶ ಅಂಚಟಗೇರಿಯವರಿಗೆ ಮೇಯರ್ ಸ್ಥಾನ ಕೊಡಿಸಲು ಕಸರತ್ತು ನಡೆಸಿದ್ದಾರೆ. ಈಗಾಗಲೇ ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಅಮೃತ ದೇಸಾಯಿ ಅವರು ಧಾರವಾಡ ಗ್ರಾಮೀಣ ವ್ಯಾಪ್ತಿಯ ಪಾಲಿಕೆ ಸದಸ್ಯರಿಗೆ ಮೇಯರ್ ಸ್ಥಾನ ನೀಡುವಂತೆ ಒತ್ತಾಯ ಕೂಡಾ ಮಾಡಿ ಜಿಲ್ಲಾ ಹಾಗೂ ರಾಜ್ಯ ನಾಯಕರಿ ಗಮನಕ್ಕೆ ಇದನ್ನು ತರಲಾಗುವುದು ಎಂದು ಹೇಳಿಕೊಂಡಿದ್ದಾರೆ. ಈ ಬಾರಿ ಮೇಯರ್ ಸ್ಥಾನವು ಧಾರವಾಡ ಗ್ರಾಮೀಣ ಕ್ಷೇತ್ರದ ಪಾಲಾಗುವ ಸಾಧ್ಯತೆ ಹೆಚ್ಚಾಗಿ ಕಂಡು ಬರುತ್ತಿವೆ.
ರಾಮಣ್ಣ ಬಡಿಗೇರ ಪರ ಶಾಸಕ ಅರವಿಂದ ಬೆಲ್ಲದ ಕಸರತ್ತು:
ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 30ನೇ ವಾರ್ಡಿನಿಂದ ರಾಮಣ್ಣ ಬಡಿಗೇರವರು ಪಾಲಿಕೆ ಸದಸ್ಯರಾಗಿ ಆಯ್ಕೆ ಅಗಿದ್ದು, ಈ ಹಿನ್ನೆಲೆಯಲ್ಲಿ ಹಿರಿತನದ ಆಧಾರದ ಮೇಲೆ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನ ಸಭಾಕ್ಷೇತ್ರ ಶಾಸಕ ಅರವಿಂದ ಬೆಲ್ಲದವರು ಬ್ಯಾಟಿ ಬಿಸುತ್ತಿದ್ದಾರೆ. ಈಗಾಗಲೇ ಅರವಿಂದ ಬೆಲ್ಲದವರಿಗೆ ಸಿಎಂ ಸ್ಥಾನ ಹಾಗೂ ಸಚಿವ ಸ್ಥಾನ ವು ಕೈತಪ್ಪಿದ್ದು, ಮೇಯರ್ ಸ್ಥಾನವನ್ನಾದರೂ ತಮ್ಮ ಬೆಂಬಲಿಗರಾದ ರಾಮನ ಬಡಿಗೇರವರಿಗೆ ನೀಡಬೇಕು ಎಂದು ಜಿಲ್ಲೆಯ ನಾಯಕರ ಹಾಗೂ ರಾಜ್ಯ ನಾಯಲರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಕಳೆದ ಬಾರಿಯು ರಾಮನ ಬಡಿಗೇರವರಿಗೆ ಮೇಯರ್ ಸ್ಥಾನವು ಕೊನೆಯ ಕ್ಷಣದಲ್ಲಿ ಕೈತಪ್ಪಿದ್ದು, ಈ ಬಾರಿ ಮೇಯರ್ ಸ್ಥಾನ ಏರಲು ಶಾಸಕ ಅರವಿಂದ ಬೆಲ್ಲದರ ಮೂಲಕ ಒತ್ತಡ ಹೇರುತ್ತಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಶಾಸಕ ಅರವಿಂದ ಬೆಲ್ಲದ್ ನಡುವೆ ಈ ಹಿಂದಿನಿಂದಲೂ ಮುನಿಸು ಕಾಣಿಸಿಕೊಂಡಿದ್ದುನ್ನು ಇಲ್ಲಿ ಸ್ಮರಿಸಬಹುದಾಗಿದೆ. ಕಳೆದ ವಾರ ಹುಬ್ಬಳ್ಳಿಯ ಬಿಜೆಪಿ ಕಚೇರಿಯಲ್ಲಿ ನಡೆದ ಪಾಲಿಕೆ ವಿಚಾರ ಸುದ್ದಿಗೋಷ್ಠಿಯಲ್ಲಿ ಬಹುದಿನಗಳ ಬಳಿಕ ಶೆಟ್ಟರ ಹಾಗೂ ಬೆಲ್ಲದ ಜೊತೆಗೆ ಕಾಣಿಸಿಕೊಂಡಿದ್ದಾರೆ. ಆದರೆ ಮೇಯರ್ ಆಯ್ಕೆಯಲ್ಲಿ ನಾನಾ ನಿನಾ ಎನ್ನುವ ರೀತಿಯಲ್ಲಿ ಈ ಇಬ್ಬರ ನಾಯಕರ ನಡುವೆ ಈಗ ಪೈಪೋಟಿ ಕಡುಬರುತ್ತಿದೆ ಎಂದು ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆ ಚುನಾವಣೆ ಮುಗಿದು ಈಗ ಮೇಯರ್ ಗದ್ದುಗೆ ಗುದ್ದಾಟ ಬಿಜೆಪಿಯಲ್ಲಿ ಜೋರಾಗಿ ಕಂಡುಬರುತ್ತಿದ್ದು, ಈ ಬಾರಿ ಶೆಟ್ಟರ ಬೆಲ್ಲದ ನಡುವಿನ ಪೈಪೋಟಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಾಗೂ ಶಾಸಕ ಅಮೃತ ದೇಸಾಯಿ ಬೆಂಬಲಿಗರಾದ ಈರೇಶ ಅಂಚಟಗೇರಿಯವರಿಗೆ ಮೇಯರ್ ಭಾಗ್ಯ ಒದಗಿ ಬರಲಿದೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈಗಾಗಲೇ ಧಾರವಾಡದಲ್ಲಿ ಪ್ರತ್ಯೇಕ ಪಾಲಿಕೆಯ ಕೂಗು ಕೂಡಾ ಕೇಳಿ ಬರುತ್ತಿದ್ದು, ಈ ಎಲ್ಲ ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ನೋಡಿದಾಗ ಈ ಬಾರಿ ಪಾಲಿಕೆಯ ಮೇಯರ್ ಗದ್ದುಗೆ ಧಾರವಾಡ ಪಾಲಾಗುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.




