ಮೇಕೆದಾಟು ಹೋರಾಟ ವಿಚಾರದಲ್ಲಿ ರೈತರನ್ನು ದಿಕ್ಕು ತಪ್ಪಿಸಿದ ಹೋರಾಟ: ಕರವೇ ರಾಜ್ಯಾಧ್ಯಕ್ಷ ಕೃಷ್ಣೇಗೌಡ

ರಾಮನಗರ: ಇದೇ ಸೆ.23 ರಂದು ಮೇಕೆದಾಟು ಹೋರಾಟ ಸಮಿತಿ ಕರೆ ನೀಡಿದ್ದ ಪಾದಯಾತ್ರೆಗೆ ನಾವು ಸಹಕಾರ ಮತ್ತು ಬೆಂಬಲ ನೀಡಿದ್ದೆವು. ಆದರೆ ಮಂಚೂಣಿಯಲ್ಲಿದ್ದ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಸಂಪತ್ ಮತ್ತಿತರರು ಪಾದಯಾತ್ರೆ ಸಂದರ್ಭದಲ್ಲಿ ಎಸಿ ಕಾರಿನಲ್ಲಿ ಪಾದಯಾತ್ರೆ ಜೊತೆಯಲ್ಲಿ ಬಂದು ರೈತರನ್ನು ದಿಕ್ಕು ತಪ್ಪಿಸಿದ್ದಲ್ಲದೆ ರೈತನಾಯಕ ನಂಜುಂಡಸ್ವಾಮಿ ಅವರ ಆದರ್ಶಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ್ದಾರೆ ಎಂದು ಕರವೇ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷ ಕೃಷ್ಣೇಗೌಡ ಕಿಡಿ ಕಾರಿದರು.
ನಗರದ ಕರವೇ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಹೋರಾಟ ಸಮಿತಿ ನಾಯಕರನ್ಮು ನಂಬಿ ನಾವು ಪಾದಯಾತ್ರೆಗೆ ಬೆಂಬಲ ಕೊಡುವ ತೀರ್ಮಾನ ತೆಗೆದುಕೊಂಡಿದ್ದೇವು. ಸೆ.23 ರಂದು ಪಾದಯಾತ್ರೆ ಪಾರಂಭದ ದಿನ ನಮ್ಮ ವೇದಿಕೆಯಿಂದ ಮುನ್ನೂರ ಎಂಭತ್ತು ಜನ ಪಾದಯಾತ್ರೆ ಮಾಡಿದೆವು. ಆದರೆ ಹೋರಾಟ ಸಮಿತಿ ಮುಖಂಡರು ಎಸಿ ಕಾರಿನಲ್ಲಿ ಕುಳಿತು ನಮ್ಮೊಂದಿಗೆ ಬಂದರು. ಅವರ ಈ ಧೋರಣೆಯಿಂದ ನಾವು ಪಾದಯಾತ್ರೆಯಿಂದ ಹಿಂದೆ ಸರಿದಿದ್ದೇವೆ ಎಂದು ಹೇಳಿದರು.
ರೈತ ಸಂಘದ ನಾಯಕರು ಪಾದಯಾತ್ರೆಗೆ ಪೊಲೀಸರ ಅನುಮತಿಯನ್ನು ಪಡೆದಿರಲಿಲ್ಲ. ಇದಕ್ಕೆ ರೈತ ಸಂಘದ ನಾಯಕರೆ ಜನರಿಗೆ ಉತ್ತರಿಸಬೇಕು ಎಂದು ಆಗ್ರಹಿಸಿದ ಅವರು, ಪಾದಯಾತ್ರೆ ಸಂದರ್ಭದಲ್ಲಿ ಕುಡಿಯುವ ನೀರು, ಆಹಾರ ವ್ಯವಸ್ಥೆಯನ್ನು ಮಾಡಿರಲಿಲ್ಲ. ರೈತ ನಾಯಕರು ಹಸಿರು ಸಾಲಿನ ಗೌರವವನ್ನು ಕಳೆದಿದ್ದಾರೆ. ಆದರೆ ಮೇಕೆದಾಟು ಹೋರಾಟದಿಂದ ನಮ್ಮ ವೇದಿಕೆ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಪ್ರತ್ಯೇಕವಾಗಿ ಹೋರಾಟ ನಡೆಸಲಿದ್ದೇವೆ ಎಂದು ಘೋಷಿಸಿದರು.




