KMF Bamul: ಹಾಲಿನ ಖರೀದಿ ದರಕ್ಕೆ ಮತ್ತೆ ಬಮೂಲ್ ನಿಂದ ಗುನ್ನಾ

ರಾಜೇಶ್ ಕೊಂಡಾಪುರ
ರಾಮನಗರ: ಕೋವಿಡ್ನಿಂದ ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ಹೈನುಗಾರರಿಗೆ ಬಮೂಲ್ ಗಾಯದ ಮೇಲೆ ಮತ್ತೊಂದು ಬರೆ ಎಳೆದಿದೆ. ಲೀಟರ್ ಹಾಲಿನ ಖರೀದಿ ದರವನ್ನು ಏಕಾಏಕೀ 1.5 ರೂ.ಗಳಿಗೆ ಇಳಿಸಿದೆ. ಆದರೆ, ರಾಸುಗಳ ಮೇವಿನ ಬೆಲೆ ಏರಿಕೆಯಾಗುತ್ತಲೇ ಇದೆ. ಈ ಮೊದಲು ಒಂದು ಲೀಟರ್ ಹಾಲಿಗೆ 28 ರೂ.ಗಳನ್ನು ನೀಡಿ, ಕೆಎಂಎಫ್ನ ಅಂಗ ಸಂಸ್ಥೆಯಾದ ಬಮೂಲ್ ಖರೀದಿಸುತ್ತಿತು. ಕೋವಿಡ್ ಬಳಿಕ 2 ರೂ.ಇಳಿಕೆ ಮಾಡಿತ್ತು. ಆದರೀಗ ಮತ್ತೊಮ್ಮೆ ಒಂದೂವರೆ ರೂ.ಗಳನ್ನು ಇಳಿಕೆ ಮಾಡಿದೆ.
ಸಧ್ಯಕ್ಕೆ ಒಂದು ಲೀಟರ್ ಹಾಲಿಗೆ ರೈತರಿಗೆ ಕೇವಲ 24.5 ರೂ.ಗಳನ್ನು ನೀಡುತ್ತಿದೆ. ಇದರಿಂದ ಹೈನುಗಾರರು ಸಂಕಷ್ಟಕ್ಕೆ ಸಿಲುಕಿದ್ದು, ಹಾಲು ಮಾರಾಟಕ್ಕೆ ಹಿಂಜರಿಯುತ್ತಿದ್ದಾರೆ. ಸಧ್ಯಕ್ಕೆ ಜಿಲ್ಲೆಯಿಂದ 1 ಲಕ್ಷ ಲೀಟರ್ಗು ಹೆಚ್ಚು ಹಾಲು ಪೂರೈಕೆಯಾಗುತ್ತಿದೆ. ಹೈನುಗಾರಿಕೆಯನ್ನೆ ಲಂಬಿ ಲಕ್ಷಗಟ್ಟಲೇ ರೈತರು ಜೀವನ ಸಾಗಿಸುತ್ತಿದ್ದಾರೆ. ಆದರೆ, ಬಮೂಲ್ನ ದರ ಇಳಿಕೆ ನಿರ್ಧಾರಗಳಿಂದ ಹೈನುಗಾರರು ಬಸವಳಿಯುತ್ತಿದ್ದಾರೆ.
ಹೈನುಗಾರರಿಗೆ ಸಂಕಷ್ಟ:
ಇನ್ನು ಹಾಲಿನ ಗುಣಮಟ್ಟ ಪರೀಕ್ಷೆಯು ಹೆಚ್ಚಾಗಿದ್ದು, ಹಾಲಿನ ಫ್ಯಾಟ್ ಅಂಶವು 4.5 ಡಿಗ್ರಿಗಿಂತ ಹೆಚ್ಚಾಗಿದ್ದರಷ್ಟೆ ಹಾಲಿನ ಡೈರಿಗಳು ಹಾಲು ಖರೀದಿಸುತ್ತವೆ. ಹಾಲಿನ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದರಿಂದ ಹೈನುಗಾರರು ಈ ಕಸುಬಿನಿಂದಲ್ಲೇ ವಿಮುಖರಾಗಲು ಮುಂದಾಗಿದ್ದಾರೆ.
ಮೇವು ದರ ಏರಿಕೆ?
ರಾಸುಗಳಿಗೆ ಫಿಡ್ಸ್, ಇಂಡಿ, ಹೊಟ್ಟು..ಹೀಗೆ ವಿವಿಧ ರೀತಿಯ ತಿಂಡಿಗಳನ್ನು ದಿನಕ್ಕೆ ಕನಿಷ್ಟ ಮೂರು ಹೊತ್ತು ನೀಡಬೇಕು. ಈ ಮೇವುಗಳ ಸಹ ಹಾಲಿನ ಡೈರಿಯಲ್ಲಿಯೇ ದೊರೆಯುತ್ತವೆ. ಆದರೆ, ಇವುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ಒನ್ನೊಂದೆಡೆ ಹಾಲಿನ ದರ ಕಡಿಮೆಯಾಗುತ್ತಿರುವುದರಿಂದ ರಾಸುಗಳ ನಿರ್ವಹಣೆಯು ಕಷ್ಟವಾಗಿದೆ.
ಕೆಎಂಎಫ್ ತನ್ನ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದರಲ್ಲಿ ವಿಫಲಗೊಳ್ಳುತ್ತಿದೆ ಎಂಬ ಆರೋಪವು ಕೇಳಿಬಂದಿದೆ. ಮಾರುಕಟ್ಟೆಯಲ್ಲಿನ ವಿವಿಧ ಖಾಸಗಿ ಹಾಲಿನ ಬ್ರ್ಯಾಂಡ್ಗಳು ನಂದಿನಿ ಉತ್ಪನ್ನಗಳಿಗೆ ಪೈಪೋಟಿ ನೀಡುತ್ತಿವೆ. ಇದಲ್ಲದೇ, ಮಾರಾಟಗಾರರಿಗೆ ಕೆಎಂಫ್ ಕಡಿಮೆ ಕಮಿಷನ್ ಗೆ ಪಡಿಸಿದೆ. ಆದರೆ, ಖಾಸಗಿ ಉತ್ಪನ್ನಗಳು ಮಾರಾಟ ದರಕ್ಕಿಂತ ಹೆಚ್ಚಾಗಿಯೇ ಕಮಿಷನ್ ನೀಡುತ್ತಿದೆ. ಹೀಗಾಗಿ ಮಾರಾಟಗಾರರು, ಖಾಸಗಿ ಉತ್ಪನ್ನಗಳನ್ನೆ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಇದರಿಂದಾಗಿ ಕೆಎಂಎಫ್ ಉತ್ಪನ್ನಗಳ ಮಾರಾಟ ಪ್ರಮಾಣ ಕಡಿಮೆಯಾದರೆ, ಹಾಲಿನ ಖರೀದಿ ದರಯು ಕಡಿತಗೊಳ್ಳುತ್ತಲೇ ಇದೆ ಎನ್ನುತ್ತಾರೆ ಹೈನುಗಾರರು.
ಒಂದು ವರ್ಷದಲ್ಲೇ ಬಮೂಲ್ ಬರೊಬ್ಬರಿ 3.5 ರೂ.ಗಳನ್ನು ಕಡಿತಗೊಳಿಸಿದೆ. ಇದರಿಂದಾಗಿ ಹೈನುಗಾರರು ಪರದಾಡುತ್ತಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ, ಹಾಲಿನ ಖರೀದಿ ದರ ಇನ್ನಷ್ಟು ಕಡಿಮೆಯಾಗುತ್ತಿದೆ. ಹಾಲಿನ ಪ್ರೊತ್ಸಾಹ ದರವು ಇಳಿಕೆಯಾಗುತ್ತಿದೆ. ಈ ಬಗ್ಗೆ ಸಚಿವರು, ಸರಕಾರ ಗಮನ ಹರಿಸಬೇಕು. ಇಲ್ಲವೇ ಹೈನುಗಾರಿಕೆಗೆ ವಿದಾಯ ಹೇಳಬೇಕಾಗುತ್ತದೆ ಎನ್ನುತ್ತಾರೆ ಹೈನುಗಾರ ಮಂಜುನಾಥ್.
ಉತ್ಪನ್ನಗಳು ಲಾಸ್:
ಕೋವಿಡ್ ಸಮಯದಲ್ಲಿ ಹೆಚ್ಚಿನ ಹಾಲು ಕೆಎಂಎಫ್ಗೆ ಪೂರೈಕೆಯಾಗಿತ್ತು. ಈ ವೇಳೆ ಸಾರ್ವಜನಿಕರಿಗೆ ಉಚಿತವಾಗಿ ಹಾಲು ನೀಡುವುದರೊಂದಿಗೆ ಹಾಲಿನ ಉಪ ಉತ್ಪನ್ನಗಳನ್ನು ಸಹ ಸಿದ್ದ ಪಡಿಸಿ ಮಾರಾಟ ಮಾಡಲು ಕೆಎಂಎಫ್ ಮುಂದಾಗಿತ್ತು. ಆದರೆ, ಈ ಉತ್ಪನ್ನಗಳ ತಯಾರಿ ಪ್ರಮಾಣವನ್ನು ಮತ್ತೆ ಇಳಿಕೆ ಮಾಡಿರುವ ಹಿನ್ನಲೆಯಲ್ಲಿ ಹೈನುಗಾರರಿಗೆ ನೀಡುವ ದರವನ್ನು ಇಳಿಕೆ ಮಾಡಲಾಗಿದೆ ಎನ್ನಲಾಗಿದೆ.
ಒಂದು ವರ್ಷದಲ್ಲೇ 2 ಭಾರಿ ಹಾಲಿನ ಖರೀದಿ ದರ ಇಳಿಸಿದ್ದಾರೆ. ಒಮ್ಮೆಯು ಏರಿಕೆ ಮಾಡಿಲ್ಲ. ಹೀಗಾದರೆ, ನಾವುಗಳು ಜೀವನ ಮಾಡುವುದಾದರೂ ಹೇಗೆ? ರೈತ ಪರ ಸರಕಾರ ಎನ್ನುವ ಜನಪ್ರತಿನಿಗಳು ನಮ್ಮನ್ನು ಶೋಷಿಸುತ್ತಿವೆ. ಗ್ರಾಹಕರಿಗೆ ಮಾರಾಟ ಮಾಡುವ ದರವನ್ನು ಏರಿಕೆ ಮಾಡುವ ಕೆಎಂಎಫ್ ನಮಗೆ ನೀಡಲು ಮಾತ್ರ ಹಿಂದೇಟು ಹಾಕುತ್ತಿದೆ ಎಂದು ಹೈನುಗಾರ ಗೋಪಾಲ್ ಕಿಡಿಕಾರುತ್ತಾರೆ.




