ಉ.ಕ. ಜಿಲ್ಲೆಯಲ್ಲಿ 10 ದಿನ ಸಂಪೂರ್ಣ ಲಾಕ್ಡೌನ್ಗೆ ಎಸ್ಪಿ ಸಲಹೆ

ಕಾರವಾರ: ಮಂಗಳವಾರ ಹಾಗೂ ಶುಕ್ರವಾರ ಬೆಳಿಗ್ಗೆ 6ರಿಂದ 10 ಗಂಟೆಯ ಅವಧಿಯಲ್ಲಿ ಲಾಕ್ಡೌನ್ ತೆರವುಗೊಳಿಸಿ ಅವಶ್ಯಕ ವಸ್ತುಗಳ ಖರೀದಿಗೆ ಅವಕಾಶ ನೀಡಿರುವುದರಿಂದ ಒಮ್ಮೆಲೇ ಜನರು ಮುಗಿಬೀಳುತ್ತಿದ್ದು, ಸಂಭಾವ್ಯ ಅನಾಹುತವನ್ನು ತಪ್ಪಿಸಲು ಮುಂದಿನ 10 ದಿನಗಳ ಕಾಲ ಸಂಪೂರ್ಣ ಲಾಕ್ಡೌನ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸಲಹೆ ನೀಡಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಹೇಳಿದ್ದಾರೆ.
ಅವರು ಭಟ್ಕಳದಲ್ಲಿ ಅಧಿಕಾರಿಗಳ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೋನಾ ತಡೆಗಾಗಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸಲು ಲಾಕ್ಡೌನ್ ಹೇರಲಾಯಿತು.ಅವಶ್ಯಕ ವಸ್ತುಗಳ ಅಗತ್ಯ ಕೇಳಿಬಂದಾಗ ವಾರದಲ್ಲಿ 2 ದಿನ ಬಿಡುವು ನೀಡಲಾಯಿತು. ಆದರೆ ಬಿಡುವು ನೋಡಿಕೊಂಡು ಜನರ ನೂಕುನುಗ್ಗಲು ಉಂಟಾಗಿರುವುದರಿಂದ ಲಾಕ್ಡೌನ್ ನಿರುಪಯುಕ್ತ ಎಂಬ ಭಾವನೆ ಹರಿದಾಡಲು ಆರಂಭಿಸಿದೆ.
ಅದನ್ನು ತಪ್ಪಿಸಲು ಸಂಪೂರ್ಣ ಲಾಕ್ಡೌನ್ಗೆ ಚಿಂತನೆ ನಡೆಸಿದ್ದೇವೆ. ಈ ಅವಧಿಯಲ್ಲಿ ಅವಶ್ಯಕ ವಸ್ತುಗಳನ್ನು ಕಳೆದ ವರ್ಷದಂತೆ ಮನೆಮನೆಗೆ ತಲುಪಿಸಲು ಯೋಜನೆರೂಪಿಸಲಾಗುವುದು. ಈ ಸಂಬಂಧ ಭಟ್ಕಳ ಸಹಾಯಕ ಆಯುಕ್ತರು ಇಲ್ಲಿನ ದಿನಸಿಗಳ ಸಗಟು ವ್ಯಾಪಾರಸ್ಥರೊಂದಿಗೆ ಚರ್ಚೆ ನಡೆಸಲಿದ್ದಾರೆ. ಹಾಲು ಮಾರಾಟ ಹಾಗೂ ಕೃಷಿ ಚಟುವಟಿಕೆಗಳಿಗೆ ಹೇಗೆ ಅವಕಾಶ ನೀಡಬಹುದು ಎನ್ನುವ ಬಗ್ಗೆ ಚರ್ಚೆ ಮುಂದುವರೆದಿದೆ. ಗುರುವಾರದ ಒಳಗೆ ಜಿಲ್ಲಾಡಳಿತದಿಂದ ಸೂಕ್ತ ನಿರ್ಣಯ ಹೊರ ಬೀಳುವ ನಿರೀಕ್ಷೆ ಇದೆ ಎಂದು ವಿವರಿಸಿದರು.
ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ,ಡಿವಾಯ್ಎಸ್ಪಿ ಕೆ.ಯು.ಬೆಳ್ಳಿಯಪ್ಪ, ತಹಸೀಲ್ದಾರ ಎಸ್.ರವಿಚಂದ್ರ, ಮೊದಲಾದವರು ಉಪಸ್ಥಿತರಿದ್ದರು.




