ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಕರವೇ ಬೂಟ್ ಪಾಲಿಷ್ ಅಭಿಯಾನ ಮುಂದುವರಿಕೆ

ಬಾಗಲಕೋಟೆ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಳಂಬ ಹಿನ್ನಲೆಯಲ್ಲಿ ಕರವೇ ಕಾರ್ಯಕರ್ತರಿಂದ ಬೂಟ್ ಪಾಲಿಷ್ ಅಭಿಯಾನ ಮುಂದುವರೆದಿದೆ.
ಬಾಗಲಕೋಟೆ ವಿದ್ಯಾಗಿರಿ ಇಂಜಿನಿಯರಿಂಗ್ ಕಾಲೇಜು ಸರ್ಕಲ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಬೂಟ್ ಪಾಲಿಷ್ ಮಾಡಿ ದೇಣಿಗೆ ಸಂಗ್ರಹಿಸಿದರು. ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಬೂಟ್ ಪಾಲಿಷ್ ಅಭಿಯಾನ ಮುಂದುವೆರೆಸಿದ್ದು, ಈಚೆಗೆ ಜಿಲ್ಲಾಡಳಿತ ಭವನದಲ್ಲಿ ನಡೆದ ಬೂಟ್ ಪಾಲಿಷ್ ಅಭಿಯಾನವನ್ನು ಶಾಸಕ ವೀರಣ್ಣ ಚರಂತಿಮಠ ವ್ಯಂಗ್ಯವಾಡಿ, ನಗರದಾದ್ಯಂತ ಬೂಟ್ ಪಾಲಿಷ್ ಮಾಡಿದರೆ ಹೆಚ್ಚು ಹಣ ಸಂಗ್ರಹವಾಗುತ್ತದೆ ಎಂದು ಸಲಹೆ ನೀಡಿದ್ದರು.
ಆ ಸಲಹೆಯಂತೆ ನಗರದಾದ್ಯಂತ ಕರವೇ ಕಾರ್ಯಕರ್ತರು ಬೂಟ್ ಪಾಲಿಷ್ ಅಭಿಯಾನ ನಡೆಸಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಈ ವೇಳೆ ಶಾಸಕರ ವಿಳಂಬ ಧೋರಣೆಯನ್ನು ಖಂಡಿಸಿದರು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುವವರೆಗೂ ಪಾದರಕ್ಷೆ ಬೂಟ್ ಪಾಲಿಷ್ ಅಭಿಯಾನ ಮುಂದುವರೆಯಲಿದೆ ಎಂದು ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ತಿಳಿಸಿದರು. ಈ ವೇಳೆ ಕರವೇ ಕಾರ್ಯಕರ್ತರು ಇದ್ದರು.




