ಚಿಕ್ಕಮಗಳೂರು: ಮರು ಮತ ಎಣಿಕೆಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ 6 ಮತಗಳ ಅಂತರದಿಂದ ಪರಾಭಾವಗೊಂಡಿರುವ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಆಕ್ಷೇಪಣಾ ಪತ್ರ ಸಲ್ಲಿಸಿರುವುದಲ್ಲದೆ ಕಾಂಗ್ರೆಸ್ ಕಾರ್ಯಕರ್ತರು ಮತ ಎಣಿಕೆ ಕೇಂದ್ರದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಮರು ಮತ ಎಣಿಕೆಗೆ ಕೇಳಿಕೊಂಡಾಗ ಚುನಾವಣಾ ಅಧಿಕಾರಿಗಳು ಒಪ್ಪಿಗೆ ಕೊಟ್ಟಿಲ್ಲ ಎನ್ನಲಾಗಿದ್ದು, ಇದರಿಂದ ಸಿಡಿಮಿಡಿಗೊಂಡ ಕಾಂಗ್ರೆಸ್ ಕಾರ್ಯಕರ್ತರು ಮತ ಎಣಿಕೆ ಕೇಂದ್ರದೆದುರು ದೌಡಾಯಿಸಿ, ʼಅಯ್ಯೊಯ್ಯೋ.. ಅನ್ಯಾಯʼ ಎಂದು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು
ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಚುನಾವಣಾಧಿಕಾರಿಗೆ ಆಕ್ಷೇಪಣಾ ಪತ್ರವನ್ನು ಸಲ್ಲಿಸಿದ್ದಾರೆ. ತಕ್ಷಣ ಮೇಲ್ಮನವಿ ಸಲ್ಲಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೂಚಿಸಿರುವುದು ತಿಳಿದುಬಂದಿದೆ. ಹೀಗಾಗಿ ಗೆದ್ದ ಅಭ್ಯರ್ಥಿ ಬಗ್ಗೆ ಗೊಂದಲ ಉಂಟಾಗಿದ್ದು, ಚುನಾವಣಾಧಿಕಾರಿಗಳು ಪ್ರಮಾಣಪತ್ರ ನೀಡಿಲ್ಲ
ಕಡೂರಿನ 7 ಸದಸ್ಯರು ಮತದಾನದ ವೇಳೆ ಬಿಜೆಪಿ ಒತ್ತಡಕ್ಕೆ ಮಣಿದು ಬೆಂಗಳೂರಿಗೆ ಪ್ರವಾಸ ಹೋಗಿದ್ದು ಮತ್ತು ತಿರಸ್ಕೃತ 39 ಮತಗಳಲ್ಲಿ 25 ಮತಗಳು ಗಾಯತ್ರಿ ಶಾಂತೇಗೌಡ ಪರ ಇದ್ದವು ಎನ್ನಲಾಗುತ್ತಿದೆ. ಇಂತಹ ಅನುಮಾನ ಸೃಷ್ಟಿಯಾಗಿದ್ದರಿಂದ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಆಕ್ಷೇಪಣಾ ಪತ್ರ ಸಲ್ಲಿಸಿದ್ದಾರೆ




