ಪತ್ರಕರ್ತರ ಸಂಘದ ವತಿಯಿಂದ ಕಸಾಪ ಅಧ್ಯಕ್ಷ ಬಿ.ಟಿ. ನಾಗೇಶ್ ಗೆ ಅಭಿನಂದನೆ

ರಾಮನಗರ: ಜಿಲ್ಲಾಡಳಿತ, ಜನ ಪ್ರತಿನಿಧಿಗಳು ಮತ್ತು ಸರ್ಕಾರದ ಮೇಲೆ ಒತ್ತಡ ಹೇರಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಆಧ್ಯತೆ ಕೊಡುವುದಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ತಿಳಿಸಿದರು.
ಇಲ್ಲಿನ ಪರಿವೀಕ್ಷಣಾ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಮನಗರ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿಯ ಕಾರ್ಯಕ್ರಮಗಳನ್ನು ನಡೆಸಲು ಸೂಕ್ತ ವೇದಿಕೆಗಳು ಇಲ್ಲ. ಹೀಗಾಗಿ ಕನ್ನಡ ಭವನಗಳನ್ನು ನಿರ್ಮಿಸುವುದರ ಮೂಲಕ ಈ ಕೊರತೆ ನೀಗಿಸುವುದು ತಮ್ಮ ಉದ್ದೇಶ ಎಂದರು.
ಕನ್ನಡ ಸಾಹಿತ್ಯವನ್ನು ಪ್ರತಿ ಮನೆ, ಮನೆಗೆ ಕೊಂಡೊಯ್ಯುವುದು, ಕನ್ನಡ ಭಾಷೆ, ಸಾಹಿತ್ಯದ ವಿಚಾರದಲ್ಲಿ ಪರಿಷತ್ತಿನ ಮೂಲಕ ನಡೆಯುವ ಕಾರ್ಯಕ್ರಮಗಳಿಗೆ ಅವರು ಮಾಧ್ಯಮಗಳ ಸಹಕಾರ ಬಯಸಿದ ಅವರು, ಕನ್ನಡ ಸಾಹಿತ್ಯ ಪರಿಷತ್ತಿನ ರಾಮನಗರ ಜಿಲ್ಲಾ ಶಾಖೆಗೆ ಎರಡನೇ ಬಾರಿಗೆ ತಮ್ಮನ್ನು ಸದಸ್ಯರು ಆಯ್ಕೆ ಮಾಡಿದ್ದಾರೆ. ತಮ್ಮ ಹೊಣೆಗಾರಿಕೆ ಇಮ್ಮಡಿಸಿದೆ. ಪತ್ರಕರ್ತನಾಗಿ ಕನ್ನಡ ತೇರನ್ನು ಮತ್ತೊಮ್ಮೆ ಎಳೆಯಲು ಮುಂದಾಗಿದ್ದು ಎಲ್ಲರ ವಿಶ್ವಾಸದೊಂದಿಗೆ ತಮ್ಮ ಕರ್ತವ್ಯ ನಿರ್ವಹಿಸುತ್ತೇನೆಂದು ಹೇಳಿದರು.
ಹಿರಿಯ ಪತ್ರಕರ್ತ ಚಲವರಾಜು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಯುಡಬ್ಲುಜೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಿ. ಸೂರ್ಯಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರಾದ ರವೀಂದ್ರ ಹೇರಳೆ, ಅಪ್ರೋಜ್ ಖಾನ್, ಮಾಗಡಿ ಸಿದ್ದಲಿಂಗೇಶ್ವರ್, ಸಂದೀಪ್ ಕಾಂತಾವರ ಸೇರಿದಂತೆ ಹಲವು ಪತ್ರಕರ್ತರು ಹಾಜರಿದ್ದರು. ಪತ್ರಕರ್ತ ಜಗದೀಶ್.ಆರ್. (ಯೋಗಿ) ಸ್ವಾಗತಿಸಿದರು. ಪತ್ರಕರ್ತ ಟಿ.ಶಿವರಾಜು ವಂದಿಸಿದರು.




