ಮೈಸೂರಿನ ಸುಧರ್ಮ ಸಂಸ್ಕೃತ ಪತ್ರಿಕೆಯ ಜಯಲಕ್ಷ್ಮಿಗೆ ಪದ್ಮಶ್ರೀ ಪ್ರಶಸ್ತಿ

ಮೈಸೂರು : ಸಾಂಸ್ಕೃತಿಕ ನಗರ ಮೈಸೂರಿನ ‘ಸುಧರ್ಮ’ಸಂಸ್ಕೃತ ಪತ್ರಿಕೆಯ ಕೆ.ಎಸ್.ಜಯಲಕ್ಷ್ಮಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ದೊರಕಿದೆ.
ಕಳೆದ ಮೂರು ದಶಕಗಳಿಂದ ದಿವಂಗತ ಸಂಪತ್ ಕುಮಾರ್ ಹಾಗೂ ಕೆ.ಎಸ್.ಜಯಲಕ್ಷ್ಮಿ ದಂಪತಿ ಸಂಸ್ಕೃತ ಪತ್ರಿಕೆ ‘ ಸುಧರ್ಮ’ವನ್ನು ನಡೆಸಿಕೊಂಡು ಬರುತ್ತಿದ್ದು, ಇವರ ಈ ಕಾರ್ಯವನ್ನು ಗುರುತಿಸಿದ ಕೇಂದ್ರ ಸರ್ಕಾರ 2020ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ.
1970ರಲ್ಲಿ ವರದರಾಜ ಅಯ್ಯಂಗಾರ್ ಅವರು ಸುಧರ್ಮ ಪತ್ರಿಕೆಯನ್ನು ಪ್ರಾರಂಭಿಸಿದ್ದರು. ಸಂಸ್ಕೃತ ಎಂದರೆ ಕೇವಲ ವಿದ್ವಾಂಸರಿಗೆ ಎಂಬ ಗ್ರಹಿಕೆಯನ್ನು ಬದಲಾಯಿಸುವುದಕ್ಕೆ, ದೈನಂದಿನ ವಿಚಾರಗಳು ಸಂಸ್ಕೃತದಲ್ಲಿ ವರದಿಯಾಗಿ, ಅವನ್ನು ಜನ ಓದುವಂತಾಗಲಿ ಎಂಬ ಉದಾತ್ತ ಧ್ಯೇಯದಿಂದ ಪ್ರಾರಂಭಿಸಿದ್ದ ಪತ್ರಿಕೆ ಇದಾಗಿದೆ. 1990ರಲ್ಲಿ ವರದರಾಜ ಅಯ್ಯಂಗಾರ್ ಅವರ ಮರಣಾನಂತರ ಸಂಪತ್ ಕುಮಾರ್ ದಂಪತಿ ಅದನ್ನು ಮುಂದುವರಿಸಿಕೊಂಡು ಬಂದಿದ್ದರು.
ನಾಲ್ಕು ಪುಟಗಳ ಪತ್ರಿಕೆಯಲ್ಲಿ ದಿನದ ಮುಖ್ಯ ವಿದ್ಯಮಾನ, ಶೈಕ್ಷಣಿಕ ಕೋರ್ಸ್ಗಳ ಕುರಿತ ಮಾಹಿತಿ, ಕ್ರೀಡೆ ಇತ್ಯಾದಿ ಸಂಗತಿಗಳ ಕುರಿತ ಬರಹಗಳು ಪ್ರಕಟವಾಗುತ್ತವೆ. ಸುಧರ್ಮ ತನ್ನ ಅಂತರ್ಜಾಲ ಅವತರಣಿಕೆಯಲ್ಲಿ ಸುಮಾರು ಒಂದೂವರೆ ಲಕ್ಷ ಓದುಗರನ್ನು ಹೊಂದಿದೆ.




