ಭಟ್ಕಳ: ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಎತ್ತಂಗಡಿ

ಕಾರವಾರ : ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತದ ಮುಖ್ಯಾಧಿಕಾರಿಯಾಗಿದ್ದ ಅಜಯ್ ಭಂಡಾರ್ಕರ್ ಅವರ ವರ್ಗಾವಣೆಗೆ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಕಾರಣವಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಜಾಲಿ ಪಟ್ಟಣ ಪಂಚಾಯತ್ ಓರ್ವ ನಿಷ್ಠಾವಂತ ಅಧಿಕಾರಿಯೊಬ್ಬರನ್ನು ಕಳೆದುಕೊಂಡಂತಾಗಿದೆ.
ಈ ಜನಪ್ರತಿನಿಧಿಗಳು ತಮ್ಮ ಸ್ವಹಿತಾಸಕ್ತಿಗಾಗಿ ಎಂತಹ ಕೀಳುಮಟ್ಟಕ್ಕೂ ಇಳಿಯುತ್ತಾರೆ ಎನ್ನುವುದಕ್ಕೆ ಜಾಲಿ ಪಟ್ಟಣ ಪಂಚಾಯತದ ನಿಷ್ಟಾವಂತ ಮುಖ್ಯಾಧಿಕಾರಿ ಅಜಯ್ ಭಂಡಾರ್ಕರ್ ಅವರ ವರ್ಗಾವಣೆಯೇ ಸಾಕ್ಷಿಯಾಗಿದೆ.
ಅಜಯ್ ಭಂಡಾರ್ಕರ್ ಕೊರೋನಾ ಸೋಂಕಿನ ಪ್ರಾರಂಭದಿಂದಲೂ ಪ್ರಾಮಾಣಿಕತೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಯಾವುದೇ ರಾಜಕೀಯ ಪ್ರಭಾವ,ಹಣದ ಆಮಿಷ ಇದ್ಯಾವುದಕ್ಕೂ ಜಗ್ಗದೇ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದರು. ಇದೇ ಇವರ ವರ್ಗಾವಣೆಗೆ ಮುಳುವಾಯಿತು ಎನ್ನಲಾಗಿದೆ.
ಇವರು ಹಿಂದೊಮ್ಮೆ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕರ್ನಾಟಕ ಗೃಹ ಮಂಡಳಿ ಬಡಾವಣೆಯ ನಾಮಫಲಕ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿದ್ದರು.ಈ ಸಮಯದಲ್ಲಿ ಕೆಲವು ಜನ ಪ್ರತಿನಿಧಿಗಳಿಂದ ಹಿಡಿದು ಪಟ್ಟಭದ್ರ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಭಂಡಾರ್ಕರ ಅವರು ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದ್ದರು.
ಇವರ ವರ್ಗಾವಣೆಯ ವಿರುದ್ದ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ಕೇಳಿ ಬರುತ್ತಿವೆ. ಕೋವಿಡ್ ಸಮಯದಲ್ಲಿ ಕುಟುಂಬವೊಂದು ಕೋವಿಡ್ ನಿಯಮಾವಳಿಯನ್ನು ಗಾಳಿಗೆ ತೂರಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಅಂತ್ಯಸಂಸ್ಕಾರ ಮಾಡುವ ಸಂದರ್ಭದಲ್ಲಿ ಇದೆ ಅಜಯ್ ಭಂಡಾರ್ಕರ್ ಮುಲಾಜಿಲ್ಲದೇ ಶಿಸ್ತಿನ ಕ್ರಮವನ್ನು ಕೈಗೊಂಡಿದ್ದರು.ಇವರ ಈ ಕರ್ತವ್ಯ ನಿಷ್ಠೆಯೇ ಇಂದು ಇವರ ವರ್ಗಾವಣೆಗೆ ಕಾರಣವಾಯಿತು ಎಂಬ ಆಕ್ರೋಶಗಳು ಕೇಳಿ ಬರುತ್ತಿವೆ. ಇವರ ಇಂದಿನ ವರ್ಗಾವಣೆಗೆ ಶಾಸಕ ಸುನಿಲ್ ನಾಯ್ಕ ಅವರು ನೇರವಾಗಿ ಹೊಣೆಯಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ವರ್ಗಾವಣೆಯ ಕಾರಣ ಕೇಳಿದರೆ ಇದರಲ್ಲಿ ನನ್ನ ಹಸ್ತಕ್ಷೇಪ ಇಲ್ಲ ಇದಕ್ಕೆ ಕಾರಣ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಎಂದು ಸುನೀಲ್ ನಾಯ್ಕ ಅವರ ಕಡೆ ಬೆರಳು ತೋರಿಸುತ್ತಿದ್ದಾರೆ. ಒಟ್ಟಾರೆ ರಾಜಕೀಯ ಹಿತಾಸಕ್ತಿಗಾಗಿ ಇಂದು ಜಾಲಿ ಪಟ್ಟಣ ಪಂಚಾಯತ್ ಒಬ್ಬ ನಿಷ್ಠಾವಂತ ಅಧಿಕಾರಿಯನ್ನು ಕಳೆದುಕೊಂಡಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕ್ಷೇತ್ರದ ಶಾಸಕರು ಅಜಯ್ ಭಂಡಾರ್ಕರ್ ಅವರನ್ನು ಜಾಲಿಯಿಂದ ಹೊನ್ನಾವರ ತಾಲೂಕಿನ ಮಂಕಿ ಪಟ್ಟಣ ಪಂಚಾಯತಿಗೆ ವರ್ಗಾವಣೆ ಮಾಡಿದ್ದಾರೆ.ಅವರ ಜಾಗಕ್ಕೆ ಶಿರಸಿಯಲ್ಲಿ ಆರೋಗ್ಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮಚಂದ್ರ ಮಂಜುನಾಥ ವೆರ್ಣೇಕರ್ ಎಂಬ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿದ್ದಾರೆ.ಜಾಲಿ ಪಟ್ಟಣ ಪಂಚಾಯತ್ ನಿಂದ ನಿಷ್ಠಾವಂತ ಅಧಿಕಾರಿಯನ್ನು ವಿನಾಕಾರಣ ಸ್ವಹಿತಾಸಕ್ತಿ ಗಳಿಗಾಗಿ ವರ್ಗಾವಣೆ ನಡೆಸಲಾಗಿದೆ ಎಂದು ಸಾರ್ವಜನಿಕರು ಸುನೀಲ್ ನಾಯ್ಕ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.




