ಧಾರವಾಡದ ಜಿಲ್ಲೆಯಲ್ಲಿ ವಾಣಿಜ್ಯ ವ್ಯವಹಾರಕ್ಕೆ ನಿರ್ಬಂಧ ಮಾಡಿಲ್ಲ: ಡಿಸಿ ನಿತೇಶ್ ಪಾಟೀಲ್ ಸ್ಪಷ್ಟನೆ

ಧಾರವಾಡ : ಧಾರವಾಡದ SDM ಮೆಡಿಕಲ್ ಕಾಲೇಜಿನಲ್ಲಿ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ, ಸುತ್ತಲೂ ಐನೂರು ಮೀಟರ್ ಪ್ರದೇಶವನ್ನೂ ಕಂಟೋನ್ಮೆಂಟ್ ಜೂನಾಗಿ ಮಾಡಲಾಗಿದೆ. ಸುತ್ತಲಿನ ಶಾಲಾ, ಕಾಲೇಜು ಸೇರಿದಂತೆ ಅಂಗನವಾಡಿಗಳಿಗೆ ನಿರ್ಬಂಧ ಹೇರಲಾಗಿತ್ತು. ಅದೂ ಬುಧವಾರಕ್ಕೆ ಕೊನೆಗೊಳ್ಳುತ್ತದೆ. ಜೊತೆಗೆ ಎಸ್ ಡಿ ಎಂ ಸುತ್ತಲೂ ಸೇರಿದಂತೆ ಜಿಲ್ಲೆಯಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ ಹೇರಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸ್ಪಷ್ಟಪಡಿಸಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಧಾರವಾಡ ಎಸ್ ಡಿ ಎಂ ಮೆಡಿಕಲ್ ಕಾಲೇಜು ಬಳಿ ಇರುವ ಡಾ. ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರವನ್ನು ಕಂಟೋನ್ಮೆಂಟ್ ಝೋನ್ಗೆ ತೆಗೆದುಕೊಂಡಿಲ್ಲ. ಇಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಕೇವಲ ನೂರು ಜನಕ್ಕೆ ಸೇರಲು ಅವಕಾಶ ಮಾಡಿಕೊಡಲಾಗಿದೆ. ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿಗೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ತೆಗೆದುಕೊಂಡಿರಬೇಕು, ಅಂತಹವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಯಾವುದೇ ಮದುವೆ ಸಮಾರಂಭಗಳಿಗೆ ನಿರ್ಬಂಧ ಹಾಕಿಲ್ಲ ಎಂದರು.
ಎಸ್ಡಿಎಂ ಸೋಂಕು ಹರಡುವಿಕೆ ಇಳಿಮುಖವಾಗಿದೆ:
ಈಗಾಗಲೇ ಎಸ್ ಡಿ ಎಂ ಆಸ್ಪತ್ರೆಯಲ್ಲಿ 3ಸಾವಿರಕ್ಕೂ ಹೆಚ್ಚು ಟೆಸ್ಟ್ ಮಾಡಲಾಗಿದೆ. ಸಿಬ್ಬಂದಿ ಸೇರಿ ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿದ್ದು, ಹೆಚ್ಚಾಗಿ ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಸೋಂಕು ಕಂಡು ಬಂದಿತ್ತು. ಅವರಿಗೆ ಈಗಾಗಲೇ ಮೆಡಿಕಲ್ ಕಾಲೇಜು ಆವರಣದಲ್ಲಿಯೇ ಕ್ವಾರಂಟೈನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಇತ್ತೀಚೆಗೆ ಎಸ್ ಡಿ ಎಂ ನಲ್ಲಿ ನಡೆಸಲಾದ ಟೆಸ್ಟ್ನಲ್ಲಿ ಕಳೆದ ಮೂರು ದಿನಗಳಿಂದ ಕಡಿಮೆ ಪ್ರಾಮಾಣದಲ್ಲಿ ಸೋಂಕು ಕಂಡುಬಂದಿದೆ. ಪಾಸಿಟಿವ್ ಸಂಖ್ಯೆ ತುಂಬಾ ಕಡಿಮೆಯಾಗಿದೆ ಎಂದು ಹೇಳಿದರು.
ವಿಮಾನ ನಿಲ್ದಾಣ – ರೈಲ್ವೆ ನಿಲ್ದಾಣದಲ್ಲಿ ಕೋವಿಡ್ ತಪಾಸಣೆ:
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಯಾವುದೇ ಅಂತರಾಷ್ಟ್ರೀಯ ವಿಮಾನಗಳು ಆಗಮಿಸುವುದಿಲ್ಲ, ಆದರೂ ಕೂಡಾ ಒಂದು ವಿಮಾನದಿಂದ ಇನ್ನೊಂದು ವಿಮಾನ ಮೂಲಕ ಪ್ರಯಾಣಿಕರು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ಆರೋಗ್ಯ ಇಲಾಖೆಯಿಂದ ಟೆಸ್ಟ್ ಮಾಡಲು ಒಂದು ತಂಡವನ್ನು ಇಲ್ಲಿ ನಿಯೋಜನೆ ಮಾಡಲಾಗಿದೆ. ವೈರಸ್ ಲಕ್ಷಣಗಳು ಪ್ರಾಯಣಿಕರಲ್ಲಿ ಕಂಡು ಬಂದಲ್ಲಿ ಅಂತಹವರನ್ನು ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಿಸಲಾಗುವುದು. ಇದರ ಜೊತೆಗೆ ರೈಲ್ವೆ ನಿಲ್ದಾಣಗಳಲ್ಲಿಯು ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಪ್ರಯಾಣಿಕ ಆಗಮುಸುತ್ತಿರುವ ಹಿನ್ನೆಲೆಯಲ್ಲಿ, ರೈಲ್ವೆ ನಿಲ್ದಾಣಗಳಲ್ಲಿಯೂ ಕೂಡಾ ತಪಾಸಣೆಗೆ ಸಿಬ್ಬಂದಿಯನ್ನು ಈಗಾಗಲೇ ನಿಯೋಜನೆ ಮಾಡಲಾಗಿದೆ ಎಂದು ಹೇಳಿದರು.




