ಕಣ್ಣೆದುರೆ ಧರೆಗುರುಳಿದ ಮನೆ : ಉಟ್ಟಬಟ್ಟೆ ಬಿಟ್ಟು ಸರ್ವವೂ ನೀರುಪಾಲು

ಕಾರವಾರ : ಭಾರೀ ಮಳೆಗೆ ಮಾಣಿ ಹೊಳೆ ಉಕ್ಕಿ ಹರಿದ ಪರಿಣಾಮ ಮನೆಯೊಂದು ಸಂಪೂರ್ಣವಾಗಿ ಕುಸಿದು ಬಿದ್ದು, ಬಡ ಕುಟುಂಬವೊಂದು ಉಟ್ಟ ಬಟ್ಟೆ ಬಿಟ್ಟು ಬೇರೇನು ಇಲ್ಲದೆ ಕಂಗಾಲಾಗಿರುವ ಘಟನೆ ಸಿದ್ದಾಪುರ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಕರ್ಜಗಿ ಗ್ರಾಮದ ಮಹಾಬಲೇಶ್ವರ ಗೌಡ ಎಂಬುವವರ ಮನೆ ಸಂಪೂರ್ಣ ನೆಲಸಮವಾಗಿದೆ.ಮಾಣಿ ಹೊಳೆಯ ಪಕ್ಕದಲ್ಲಿರುವ ಮನೆಗೆ ಮಳೆ ನೀರು ಕಳೆದ ಗುರುವಾರ ತಡರಾತ್ರಿಯೇ ನುಗ್ಗಿದ ಪರಿಣಾಮ ಸಂಪೂರ್ಣ ಜಲಾವೃತಗೊಂಡಿತ್ತು. ತಕ್ಷಣ ಮನೆಯಲ್ಲಿದ್ದ ತಾಯಿ ಮತ್ತು ಮಗ ಇಬ್ಬರೂ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.ಆದರೆ ನೆರೆ ನಿರಂತರವಾಗಿ ಏರಿದ ಪರಿಣಾಮ ಮನೆ ಭಾಗಶಃ ಮುಳುಗಡೆಯಾಗಿ ಯಜಮಾನನ ಕಣ್ಣೆದುರೆ ಸಂಪೂರ್ಣ ಕುಸಿದುಬಿದ್ದಿದೆ. ಉಟ್ಟ ಬಟ್ಟೆಯಿಂದ ಮನೆ ಬಿಟ್ಟು ಹೊರ ಬಂದವರು ಇದೀಗ ಸರ್ವಸ್ವವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಮನೆಯಲ್ಲಿದ್ದ ಅಕ್ಕಿ, ಭತ್ತ, ಬಟ್ಟೆ, ಪಾತ್ರೆ ಅಲ್ಪ ಸ್ವಲ್ಪ ಹಣ ಎಲ್ಲವೂ ನೀರುಪಾಲಾಗಿ ಕುಟುಂಬ ಬೀದಿಗೆ ಬಿದ್ದಿದೆ.
ಮಹಾಬಲೇಶ್ವರ ಅವರ ತಂದೆ ಇತ್ತೀಚೆಗೆ ನಿಧನರಾಗಿದ್ದರು.ಹೆಂಡತಿ ಹೆರಿಗೆಯಾದ ಕಾರಣ ಇಬ್ಬರು ಮಕ್ಕಳೊಂದಿಗೆ ತವರು ಮನೆಯಲ್ಲಿದ್ದಾರೆ.ತಾಯಿಯೊಂದಿಗೆ ಮನೆಯಲ್ಲಿದ್ದ ಮಹಾಬಲೇಶ್ವರ ಅವರ ಕುಟುಂಬ ಇದೀಗ ಎಲ್ಲವನ್ನೂ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕೂಡಲೇ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ತಮಗೆ ತುರ್ತು ಅಗತ್ಯತೆಗಳನ್ನು ಪೂರೈಕೆ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ



