ವಿಷವಾಗುತ್ತಿದೆ ಘಟಪ್ರಭಾ ನದಿಯ ಜೀವಜಲ- ಪ್ರಭಾವಿ ಸಕ್ಕರೆ ಕಾರ್ಖಾನೆ ಮಾಲೀಕರಿಂದಲೇ ನದಿ ಒಡಲಿಗೆ ವಿಷ..?

ಬಾಗಲಕೋಟೆ : ಬಾಗಲಕೋಟೆ ಜಿಲ್ಲೆಯಲ್ಲಿ ತ್ರಿವಳಿ ನದಿಗಳು ಹರಿದು ಜಿಲ್ಲೆಯ ರೈತರ,ಜನರ ಪಾಲಿಗೆ ಜೀವ ನದಿಗಳಾಗಿವೆ.ಆದರೆ ಘಟಪ್ರಭಾ ನದಿಯ ಜೀವ ಜಲ ವಿಷ ಆಗುತ್ತಿದ್ಯಾ ಎನ್ನುವ ಚಿಂತೆ ರೈತರನ್ನು ಕಾಡತೊಡಗಿದೆ. ಪ್ರಭಾವಿ ರಾಜಕಾರಣಿಗಳ ಒಡೆತನದ ಸಕ್ಕರೆ ಕಾರ್ಖಾನೆಗಳಿಂದ ಘಟಪ್ರಭಾ ನದಿ ಒಡಲಿಗೆ ವಿಷ ತ್ಯಾಜ್ಯ ಹರಿಬಿಡುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಬಾಗಲಕೋಟೆ ಜಿಲ್ಲೆಯ ಮಾಚಕನೂರು ಗ್ರಾಮದ ಬಳಿಯ ಘಟಪ್ರಭಾ ನದಿಯಲ್ಲಿ ಈಚೆಗೆ ಸಾವಿರಾರು ಮೀನುಗಳು ಮಾರಣ ಹೋಮವಾಗಿತ್ತು. ಇದು ಮೊದಲೇನಲ್ಲ. ಈ ಹಿಂದೆಯೂ ಘಟಪ್ರಭಾ ನದಿಯಲ್ಲಿ ಜಲಚರ ಪ್ರಾಣಿಗಳು ರಾಶಿ ರಾಶಿಯಾಗಿ ಸತ್ತ ಬಿದ್ದಿವೆ. ಇದಕ್ಕೆ ಕಾರಣ ಕಾರ್ಖಾನೆಗಳಿಂದ ತ್ಯಾಜ್ಯ ನದಿಗೆ ಹರಿಬಿಡುತ್ತಿರುವುದರಿಂದ ನದಿ ನೀರು ವಿಷ ಆಗಿತ್ತಿದೆ ಎನ್ನುವ ಆರೋಪ. ಜೊತೆಗೆ ಘಟಪ್ರಭಾ ನದಿ ನೀರು ಕುಡಿಯಲಿಕ್ಕೂ ಜನ ಹೆದರುವಂತಾಗಿದೆ.

ಘಟಪ್ರಭಾ ನದಿ ವ್ಯಾಪ್ತಿಯಲ್ಲಿ ಪ್ರಭಾವಿ ರಾಜಕಾರಣಿಗಳ ಸಕ್ಕರೆ ಕಾರ್ಖಾನೆಗಳಿವೆ. ಘಟಪ್ರಭೆ ನದಿ ಬೆಳಗಾವಿ, ಗೋಕಾಕ್, ಮುಧೋಳ ಹಾಗೂ ಬಾಗಲಕೋಟೆ ಮೂಲಕವಾಗಿ ಹರಿಯುತ್ತೆ. ಈ ನದಿಯ ನೀರೇ ಇಲ್ಲಿನ ಜನರ ಜೀವನಾಡಿ. ಮುಧೋಳ ಭಾಗದ ಜಾಲಿಬೇರಿ, ಸೋರಗಾವಿ ಹಾಗೂ ಮಾಚಕನೂರು ಹೀಗೆ ನದಿದಡದ ಹತ್ತಾರು ಹಳ್ಳಿಗಳ ಜನರು ನೀರನ್ನು ಕುಡಿಯೋಕು ಬಾರದೇ, ಹೊಲ, ಗದ್ದೆಗಳಿಗೆ ಊಪಯೋಗಿಸಲು ಬಾರದಂತಾಗಿದೆ. ಕಾರಣ ನದಿಯ ಒಡಲಿಗೆ ಕಾರ್ಖಾನೆಗಳ ತಾಜ್ಯ ರಾಸಾಯನಿಕ ಸಲೀಸಾಗಿ ಸೇರಿಕೊಳ್ಳುತ್ತಿದೆ. ಇದ್ರಿಂದ ಸಹಸ್ರಾರು ಜಲಚರಗಳ ಮಾರಣ ಹೋಮವೇ ನಡೆದು ಹೋಗುತ್ತಿದೆ.
ಪ್ರತೀ ವರ್ಷವೂ ಕಾರ್ಖಾನೆಗಳು ನದಿಗೆ ತಾಜ್ಯವನ್ನ ಬಿಟ್ಟು ತಾಯಿಯಂತಿರೋ ಜೀವನದಿಗೆ ವಿಷ ಉಣಿಸುತ್ತಿದ್ದಾರೆ. ಇಂತವ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಹೋರಾಟಗಾರ ಯಲ್ಲಪ್ಪ ಹೆಗ್ಡೆ ಆಗ್ರಹಿಸಿದ್ದಾರೆ.
ಈ ನದಿದಡದಲ್ಲಿ ಸುಮಾರು 8 ಸಕ್ಕರೆ ಕಾರ್ಖಾನೆಗಳು, ಹಾಗೂ ಮೂರು ಡಿಸ್ಟಲರಿ ಘಟಕಗಳಿವೆ.ಗಣಿ ಸಚಿವ ಮುರುಗೇಶ್ ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆ ಹಾಗೂ ಡಿಸ್ಟಲರಿ, ಗೋಕಾಕ್ ಭಾಗದಲ್ಲಿ ಕಾಂಗ್ರೆಸ್ ಪ್ರಭಾವಿ ನಾಯಕ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಸಕ್ಕರೆ ಕಾರ್ಖಾನೆ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕ್ರಪ್ಪ ಒಡೆತನದ ಸಕ್ಕರೆ ಕಾರ್ಖಾನೆಗಳಿಂದಲೂ ತ್ಯಾಜ್ಯ ನದಿಗೆ ಬಿಡಲಾಗುತ್ತಿದೆ ಎನ್ನುವ ಆರೋಪ ಕೇಳಿಬಂದಿದೆ.

ಇನ್ನು ಸಕ್ಕರೆ ಕಾರ್ಖಾನೆಗಳು ಫೆಬ್ರವರಿ ತಿಂಗಳಲ್ಲಿ ಬಹುತೇಕ ಕಬ್ಬು ನುರಿಸುವ ಪ್ರಕ್ರಿಯೆ ಮುಕ್ತಾಯಗೊಳಿಸುತ್ತವೆ. ಆದರೆ ತ್ಯಾಜ್ಯ ಸಂಗ್ರಹಿಸಿಟ್ಟುಕೊಂಡು ಸದ್ದಿಯಿಲ್ಲದೆ ನದಿ ಒಡಲಿಗೆ ಹರಿಬಿಡುತ್ತಾರೆ. ಇದರಿಂದ ಘಟಪ್ರಭಾ ನದಿ ನೀರು ವಿಷವಾಗಿ ಮೀನು ಸೇರಿದಂತೆ ಜಲಚರ ಪ್ರಾಣಿಗಳು ಸತ್ತು ಹೋಗುತ್ತಿವೆ. ಆದರೆ ಪರಿಸರ ಅಧಿಕಾರಿಗಳು ಹೇಳೋದು ಬೇರೆ, ನದಿಯ ನೀರು ಕಪ್ಪಾಗಿರೋ ಬಗ್ಗೆ ಮಾಹಿತಿ ಸಂಗ್ರಸಲಾಗಿದ್ದು, ಕಪ್ಪಾಗಿರೋ ನೀರನ್ನ ಬೆಳಗಾವಿ ನೀರು ಪರೀಕ್ಷಾ ಲಾಬ್ ಗೆ ಕಳುಹಿಸಲಾಗಿದೆ. ವರದಿ ಒಂದ ನಂತ್ರ ಕ್ರಮ ಕೈಗೊಳ್ಳಲಾಗುವದು ಎಂಬ ಸಮಜಾಯಸಿ ನೀಡ್ತಾರೆ. ಅಲ್ಲದೇ ನಗರ ಪ್ರದೇಶದ ತ್ಯಾಜ್ಯದಿಂದ ನದಿ ನೀರು ಕಲ್ಮಶವಾಗುತ್ತಿದೆ ಎಂದು ಬಾಗಲಕೋಟೆ ಪರಿಸರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಪರಿಸರ ಅಧಿಕಾರಿ ರಾಜಶೇಕರ್ ಪುರಾಣಿಕ್ ಹೇಳುತ್ತಾರೆ.
ಒಟ್ಟಿನಲ್ಲಿ ಘಟಪ್ರಭೆ ಜೀವ ಜಲ ಪ್ರಭಾವಿ ರಾಜಕಾರಣಿಗಳ ಸಕ್ಕರೆ ಕಾರ್ಖಾನೆಗಳಿಂದಲೇ ತ್ಯಾಜ್ಯ ನದಿಗೆ ಬಿಟ್ಟು ಕಲುಷಿತಗೊಳಿಸುತ್ತಿರುವುದು ವಿಪರ್ಯಾಸವೇ ಸರಿ, ಇನ್ನಾದ್ರೂ ಅಧಿಕಾರಿಗಳು ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಂಡು ಘಟಪ್ರಭೆ ಜೀವಜಲ ಕಲುಷಿತ ಗೊಳಿಸುವುದನ್ನು ತಡೆಯಬೇಕಿದೆ.




