ವಿಷಪೂರಿತ ಆಹಾರ ಸೇವನೆ: ಒಂದೇ ಕುಟುಂಬದ ಏಳು ಜನ ಅಸ್ವಸ್ಥ

ಬಾಗಲಕೋಟೆ: ವಿಷಪೂರಿತ ಆಹಾರ ಸೇವನೆ ಪರಿಣಾಮ ಒಂದೇ ಮನೆಯ ಏಳು ಜನರು ತೀವ್ರ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಘಟನೆ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ. ಅಸ್ವಸ್ಥಗೊಂಡವರೆಲ್ಲ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ನರಸಾಪೂರ ಗ್ರಾಮದವರಾಗಿದ್ದು, 60 ವರ್ಷದ ತಾಯಿ ದುಂಡವ್ವ ಕಡ್ಲೆಪ್ಪನವರ, ಮಗ ಲಕ್ಷ್ಮಣ ಸೊಸೆ ಶಾಂತಾ, ಮೊಮ್ಮಕ್ಕಳಾದ ತೇಜಸ್ವಿನಿ, ಪಲ್ಲವಿ, ಪ್ರಥಮ್ ಮತ್ತು 6 ವರ್ಷದ ಸಾಕ್ಷಿ ಅಸ್ವಸ್ಥಗೊಂಡವರಾಗಿದ್ದಾರೆ.
ತಾಯಿ, ಮಗ, ಸೊಸೆ ಹಾಗೂ ನಾಲ್ವರು ಮೊಮ್ಮಕ್ಕಳು ತೀವ್ರ ಅಸ್ವಸ್ಥಗೊಂಡ ಕಾರಣ ಎಲ್ಲರೂ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಸೊಸೆ ಶಾಂತಾ ಕಡ್ಲೆಪ್ಪನವರ ಇತ್ತೀಚೆಗೆ ಧಾರವಾಡ ಜಿಲ್ಲೆಯ ತವರು ಮನೆಗೆ ಹೋಗಿದ್ದ ವೇಳೆ ಅಲ್ಲಿಂದ ಮನೆಯಿಂದ ಗೋದಿಯನ್ನ ತಂದಿದ್ದರು. ಆ ಗೋದಿಯಲ್ಲಿ ಮದಗುಣಕಿ (ವಿಷದ) ಬೀಜಗಳು ಸೇರಿಕೊಂಡಿದ್ದವಂತೆ ಹೀಗಾಗಿ ಆ ವಿಷದ ಬೀಜ ನಿರ್ಲಕ್ಷಿಸಿ ಹಿಟ್ಟು ಮಾಡಿಕೊಂಡು ಚಪಾತಿ ಸೇವನೆ ಮಾಡಿದ್ದು ಈ ಆವಾಂತರಕ್ಕೆ ಕಾರಣ ಎನ್ನಲಾಗ್ತಿದೆ.
ವಿಷಪೂರಿತ ಚಪಾತಿಗಳನ್ನು ಸೇವಿಸಿದ ಎಲ್ಲರಿಗೂ ವಾಂತಿಭೇದಿ ಶುರುವಾಗಿ, ಇವರೆಲ್ಲ ಅಸ್ವಸ್ಥಗೊಳ್ಳುತ್ತಿದ್ದಂತೆ ಎಲ್ಲರನ್ನು ರಾಮದುರ್ಗ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಆದ್ರೆ ಎಲ್ಲರೂ ಮಾನಸಿಕವಾಗಿ ಅಸ್ವಸ್ತಗೊಂಡವರಂತೆ ವರ್ತಿಸಿದ ಪರಿಣಾಮ, ನಿನ್ನೆ ರಾತ್ರಿ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಗೆ ಜಿಲ್ಲಾ ಆಸ್ಪತ್ರೆಗೆ ತರಲಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸದ್ಯ ಹೆಚ್ಚಿನ ಚಿಕಿತ್ಸೆಗಾಗಿ ಬಾಗಲಕೋಟೆಯ ಕುಮಾರೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇವರೆಲ್ಲ ಚಿಕಿತ್ಸೆಗೆ ಸ್ಪಂದಿಸಿ, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
