ಚಾಮುಂಡಿ ಬೆಟ್ಟದಲ್ಲಿ ಮತ್ತೊಂದೆಡೆ ಗುಡ್ಡ ಕುಸಿತ ಮನೆ ಮಾಡಿದ ಆತಂಕ

ಮೈಸೂರು: ಕಳೆದ 10 ದಿನಗಳಿಂದಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆ ಮಳೆರಾಯನ ಅಬ್ಬರಕ್ಕೆ ಇತ್ತೀಚೆಗೆ ಮೈಸೂರಿನ ಚಾಮುಂಡಿ ಬೆಟ್ಟದ ಬಳಿ ರಸ್ತೆ ಕುಸಿದಿತ್ತು, ಇದೀಗ ಇಂದು ಬೆಳಿಗ್ಗೆ ಮತ್ತೊಂದು ಕಡೆ ಗುಡ್ಡ ಕುಸಿದಿದೆ.
ರಸ್ತೆ ನವೀಕರಣಗೊಂಡು ಕೆಲವೇ ದಿನಗಳಲ್ಲಿ ಮತ್ತೆ ಗುಡ್ಡ ಕುಸಿದಿದೆ. ನಂದಿ ವಿಗ್ರಹ ಸಂಪರ್ಕ ಮಾಡುವ ರಸ್ತೆಯಲ್ಲಿ ಗುಡ್ಡ ಕುಸಿದಿದ್ದು, ನಂದಿ ಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.
20 ಅಡಿ ಇದ್ದದ್ದು 200 ಮೀಟರ್ ವರೆಗೆ ಕುಸಿದಿದ್ದು, ಗುಡ್ಡ ಕುಸಿತದ ಜೊತೆಗೆ ಮರಗಳು ರಸ್ತೆಗೆ ಉರುಳಿವೆ. ನಂದಿ ರಸ್ತೆ ಪದೇ ಪದೇ ಕುಸಿಯುತ್ತಿದ್ದು ಮೈಸೂರಿಗರಿಗೆ ಆತಂಕವನ್ನುಂಟು ಮಾಡಿದೆ. ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆ ದೊಡ್ಡ ಅಪಾಯಕ್ಕೆ ಎಡೆ ಮಾಡಿಕೊಡುತ್ತಿದೆ.
ಕಳೆದ ಕೆಲ ದಿನಗಳ ಹಿಂದೆಯೂ ಸುರಿದ ಬಾರೀ ಮಳೆಗೆ ಎರಡು ಕಡೆ ಗುಡ್ಡ ಕುಸಿದಿತ್ತು. ಆದರೆ ಈಗ ಮತ್ತೆ ಗುಡ್ಡ ಕುಸಿದಿರುವುದು ಬಾರೀ ಆತಂಕವನ್ನುಂಟು ಮಾಡಿದೆ. ಇದೇ ರೀತಿ ಮಳೆ ಮುಂದುವರೆದರೆ ಮತ್ತಷ್ಟು ಅಪಾಯ ಎದುರಾಗಲಿದೆ. ಈಗಲಾದರೂ ಜಿಲ್ಲಾಡಳಿತ ಇತ್ತ ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ.




