ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ್ ಬಂಧಿಸುವಂತೆ ದಲಿತ ಮುಖಂಡರ ಆಗ್ರಹ

ಕಾರವಾರ : ವಿಧಾನ ಪರಿಷತ್ ಸದಸ್ಯ ಶ್ರೀಕಾಂತ್ ಘೋಟ್ನೇಕರ್ ಅವರನ್ನು ಬಂಧಿಸುವಂತೆ ಹಾಗೂ ತನಿಖಾಧಿಕಾರಿ ಶಿರಸಿ ಡಿವೈಎಸ್ ಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಅವರನ್ನು ಸೇವೆಯಿಂದ ವಜಾಗೊಳಿಸಲು ಹಳಿಯಾಳದ ದಲಿತ ಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಬುಧವಾರ ಕಾರವಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಿ,ನಂತರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಮೇಘರಾಜ ಮೇತ್ರಿ, 2019 ರ ಸೆ.11ರಂದು ಹಳಿಯಾಳ ಪೊಲೀಸ್ ಠಾಣೆಯಲ್ಲಿ ವಿನೋದ ತೇಗನಳ್ಳಿ, ಅಂತರ್ ಜಾತಿ ಮದುವೆ ಪ್ರಕರಣದ ಸಲುವಾಗಿ ದಲಿತ ಮುಖಂಡರೆಲ್ಲರೂ ಇದನ್ನು ಬಗೆಹರಿಸಲು ಪೊಲೀಸ್ ಠಾಣೆಗೆ ಹೋದಾಗ ಏಕಾಏಕಿಯಾಗಿ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಘೋಟ್ನೇಕರ್ ಪೊಲೀಸ್ ಠಾಣೆಗೆ ನುಗ್ಗಿ, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳ ಸಮಕ್ಷಮದಲ್ಲಿ ದಲಿತ ಸಮುದಾಯಕ್ಕೆ ನಿಂದಿಸಿದ್ದರು. ದಲಿತ ಸಮುದಾಯಕ್ಕೆ ಬೆದರಿಕೆ ಕೂಡ ಒಡ್ಡಿದ್ದು, ಈ ಕುರಿತು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಹನುಮಂತ ಛಲವಾದಿ ಎನ್ನುವವರು ದಲಿತ ದೌರ್ಜನ್ಯ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಆದರೆ ಈ ಘಟನೆ ನಡೆದು ಸುಮಾರು ಎರಡು ವರ್ಷ ಕಳೆದರೂ ಸಹ ತನಿಖಾಧಿಕಾರಿಯು ಈವರೆಗೂ ನ್ಯಾಯಾಲಕ್ಕೆ ಆರೋಪ ಪಟ್ಟಿ (ಚಾರ್ಜ್ ಶೀಟ್) ಸಲ್ಲಿಸದೇ ವಿಳಂಬ ನೀತಿ ಅನುಸರಿಸಿದ್ದಾರೆ. ಆರೋಪಿಯನ್ನು ಇದುವರೆಗೆ ಬಂಧಿಸದೇ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರದಿಂದ ಆರೋಪಿಯೊಂದಿಗೆ ಶಾಮೀಲಾಗಿ ಇದುವರೆಗೂ ಸಹ ಘೋಟ್ನೇಕರರನ್ನು ಬಂಧಿಸಿಲ್ಲ. ಈವರೆಗೆ ಇವರ ಮೇಲೆ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿಲ್ಲ. ಈ ಕುರಿತು ತನಿಖಾಧಿಕಾರಿಯವರಿಗೆ ನೊಂದವರು ಹಾಗೂ ಸಮಾಜದ ಮುಖಂಡರು ಕೇಳಿದರೆ ತನಿಖಾಧಿಕಾರಿ ಯಾವುದಕ್ಕೂ ಸ್ಪಂದಿಸದೇ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ದೂರಿದ್ದಾರೆ.
ತಮ್ಮ ಮೇಲೆ ದಾಖಲಾಗಿರುವ ಪ್ರಕರಣ ರದ್ದು ಕೋರಿ ಘೋಟ್ನೇಕರರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಪ್ರಕರಣ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಅಡಿಯಲ್ಲಿ ಬರಲಿದ್ದು,ಹಾಲಿ ವಿಧಾನ ಪರಿಷತ್ ಸದಸ್ಯರಿರುವುದರಿಂದ ಅವರನ್ನು ಬಂಧಿಸಲು ಸಾಧ್ಯವಿಲ್ಲ. ನೀವು ಏನು ಬೇಕಾದರೂ ಮಾಡಿಕೊಳ್ಳಿರಿ. ನಾನು ಬಂಧಿಸುವುದಿಲ್ಲ ಎಂದು ಖಡಾಖಂಡಿತವಾಗಿ ತನಿಖಾಧಿಕಾರಿ ಹೇಳಿದ್ದಾರೆ ಎಂದರು.
ಹೈಕೋರ್ಟ್ ನಲ್ಲಿ ಆರೋಪಿಯು ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿಯ ಬಗ್ಗೆ ಹೈಕೋರ್ಟ್ ನಲ್ಲಿ ವಿಚಾರಿಸಿದಾಗ ಸದರಿ ಆರೋಪಿಯು ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿಯು ಅ.28 ರಂದು ವಜಾಗೊಂಡಿದೆ ಎಂದು ದಾಖಲೆ ಸಮೇತ ಹೇಳಿದ್ದಾರೆ. ಹೀಗಾಗಿ ಕೂಡಲೇ ಆರೋಪಿಯನ್ನು ಬಂಧಿಸಬೇಕು ಹಾಗೂ ನ್ಯಾಯಾಲಯಕ್ಕೆ ಕೂಡಲೇ ಆರೋಪ ಪಟ್ಟಿ ಸಲ್ಲಿಸಬೇಕು.ಈ ಮೂಲಕ ದಲಿತ ಸಮುದಾಯಕ್ಕೆ ರಕ್ಷಣೆ ಹಾಗೂ ನ್ಯಾಯ ಒದಗಿಸಿಕೊಡಬೇಕೆಂದು ಅವರು ಆಗ್ರಹಿಸಿದ್ದಾರೆ. ಒಂದಾನುವೇಳೆ ಆರೋಪಿಯನ್ನು ಬಂಧಿಸದೇ ಹಾಗೂ ತನಿಖಾಧಿಕಾರಿಯನ್ನು ಸೇವೆಯಿಂದ ಅಮಾನತ್ತಿನಲ್ಲಿ ಇಡದೇ ಹೋದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ದಲಿತ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.




