ಹಾಸನಾಂಬೆ ಅರ್ಚಕರ ನಡೆಗೆ ಭಕ್ತರ ಅಸಮಾಧಾನ

ಹಾಸನ: ಜಿಲ್ಲೆಯ ಶಕ್ತಿ ದೇವತೆ ಹಾಸನಾಂಬೆ ಸನ್ನಿಧಿಯಲ್ಲಿ ಅರ್ಚಕರು ಹೊಸ ಸಂಪ್ರದಾಯ ಆರಂಭಿಸಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಯ ನಿತ್ಯ ದರ್ಶನಕ್ಕೆ ಅಲ್ಲಿನ ಅರ್ಚಕರು ಅವಕಾಶ ಮಾಡಿದ್ದಾರೆ. ಹಾಸನಾಂಬೆಯ ಪ್ರತಿರೂಪ ಸೃಷ್ಟಿಸಿ ಗರ್ಭಗುಡಿ ಎದುರು ಪ್ರತಿಷ್ಠಾಪಿಸಿ ನಿತ್ಯ ಪೂಜೆ ನಡೆಸುವುದಕ್ಕೆ ದೇಗುಲದ ಅರ್ಚಕರು ಮುಂದಾಗಿದ್ದು, ಕಾಣಿಕೆ ಹಣದಾಸೆಗೆ ಶಕ್ತಿ ದೇವತೆಯ ಮಹತ್ವ ಕುಂದಿಸುವ ಪ್ರಯತ್ನ ನಡೆಯುತ್ತಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುತ್ತದ ರೂಪದಲ್ಲಿ ನೆಲೆಸಿರುವ ಹಾಸನಾಂಬೆ ದೇವಿ ದರ್ಶನಕ್ಕೆ ಪ್ರತಿ ವರ್ಷ ಅಶ್ವಯುಜ ಮಾಸದಲ್ಲಿ ಮಾತ್ರ ಅವಕಾಶ ನೀಡಲಾಗುತ್ತೆ. ಆದರೆ ಇದೀಗ ಹುತ್ತ ಸ್ವರೂಪಿಣಿ ಹಾಸನಾಂಬೆ ದೇವಿಯನ್ನ ಕಳಸ ರೂಪದಲ್ಲಿ ಪ್ರತಿಷ್ಠಾಪನೆ ಮಾಡಿ ನಿತ್ಯ ಪೂಜೆ ನಡೆಸಲಾಗುತ್ತಿದೆ.
ಗರ್ಭಗುಡಿ ಬಾಗಿಲಿಗೆ ಹೊಂದಿಕೊಂಡಂತೆ ದೇವಿ ಪವಾಡ ಎಂದೇ ಹೇಳುವ ನಿತ್ಯ ಜ್ಯೋತಿ ಪ್ರತಿರೂಪವೂ ಸೃಷ್ಟಿ ಮಾಡಲಾಗಿದೆ. ಇದುವರೆಗೆ ವರ್ಷಕ್ಕೊಮ್ಮೆ ದರ್ಶನ ಹೊರತು ಪಡಿಸಿ ವಾರಕ್ಕೆ ಎರಡು ದಿನ ಮಾತ್ರ ಗರ್ಭಗುಡಿ ಬಾಗಿಲಿಗೆ ಪೂಜೆ ಮಾಡುತ್ತಿದ್ದ ಅರ್ಚಕರು, ಈ ವರ್ಷದಿಂದ ನಿತ್ಯ ಪೂಜೆ ಮಾಡಲು ಆರಂಭಿಸಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಭಕ್ತರಿಂದ ಅರ್ಚಕರ ನಡೆಗೆ ಅಕ್ರೋಶ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಾಲಯದ ಆಡಳಿತ ಅಧಿಕಾರಿ ಜಗದೀಶ್ ಪ್ರತಿಕ್ರಿಯಿಸಿದ್ದು ಗರ್ಭಗುಡಿಯ ಬಾಗಿಲ ಬಳಿ ಹಾಸನಾಂಬೆ ಮೂರ್ತಿ ಪ್ರತಿರೂಪ ಮಾಡಿ ಪೂಜೆ ಮಾಡುತ್ತಿರುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಅಲ್ಲಿನ ಅರ್ಚಕರು ಏನು ಮಾಡಿದ್ದಾರೆ ಎಂದು ಅವರಿಂದ ಮಾಹಿತಿ ಪಡೆಯಲಾಗುವುದು. ಅಲ್ಲದೆ ಈ ರೀತಿಯ ಸಂಪ್ರದಾಯವೇನಾದರೂ ಈ ಹಿಂದೆ ಇತ್ತಾ ಎನ್ನುವ ಬಗ್ಗೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.




