ಹೊನ್ನಾಳಿಯಲ್ಲಿ ನಾಟಕವಾಡಿದ ಜ್ಯೋತಿಷಿ ಬಂಧನ

ದಾವಣಗೆರೆ: ಹೊನ್ನಾಳಿ ತಾಲೂಕಿನ ದೇವನಾಯ್ಕನಹಳ್ಳಿಯಲ್ಲಿ ಮನೆಗೆ ನುಗ್ಗಿ ಹೆದರಿಸಿ ಚಿನ್ನಾಭರಣ ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಸುಳ್ಳು ದೂರು ನೀಡಿ ನಾಟಕವಾಡಿದ್ದ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.
ಕೊಳ್ಳೆಗಾಲ ಮೂಲದ ಜ್ಯೋತಿಷಿ ಸಂಪತ್ ಕುಮಾರ್ ಎಂಬಾತನೇ ಬಂಧಿತ ಆರೋಪಿ. ಸುಳ್ಳು ದೂರು ನೀಡಿದ್ದ ಮನೆಯೊಡತಿ ವಿನುತಾಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಬಂಧಿತನಿಂದ ದೋಚಿದ್ದ 170 ಗ್ರಾಂ ಚಿನ್ನದ ಆಭರಣಗಳು ಹಾಗೂ 50 ಸಾವಿರ ರೂ. ನಗದನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆ ಹಿನ್ನೆಲೆ ಏನು…?
ಫೆ. 1ರಂದು ಸಂಹೆ 5.15 ರ ಸುಮಾರಿನಲ್ಲಿ ಮೂವರು ಕಪ್ಪು ಮಾಸ್ಕ್ ಧರಿಸಿ ಮನೆಗೆ ನುಗ್ಗಿ ನಗ, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು ಎಂದು ವಿನುತಾ ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ಠಾಣೆ ಸಮೀಪದಲ್ಲಿ ನಡೆದಿದ್ದ ದರೋಡೆ ಪ್ರಕರಣ ಪೊಲೀಸರಿಗೆ ಸವಾಲಾಗಿತ್ತು.
ದೂರು ನೀಡಿದ್ದ ವಿನುತಾ ಹಾಗೂ ಸಂಪತ್ ಕುಮಾರ್ ಮೊದಲೇ ಪರಿಚಯವಿದ್ದು, ಹೀಗಾಗಿ, ಸಂಪತ್ ಕುಮಾರ್ ಮನೆಯಲ್ಲಿದ್ದ ಚಿನ್ನದ ಒಡವೆಗಳು, ಮನೆಯಲ್ಲಿ ಪತಿ ಹಾಗೂ ಮಾವ ಇಟ್ಟಿದ್ದ 50 ಸಾವಿರ ರೂ. ಹಣವನ್ನ ತರುವಂತೆ ಒತ್ತಾಯ ಮಾಡಿದ್ದ. ಆದರೆ, ವಿನುತಾ ತಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಸಂಪತ್ ಕುಮಾರ್ ಸೇರಿ ಮೂವರು ಮನೆಗೆ ನುಗ್ಗಿ ಮನೆಯ ಸದಸ್ಯರಿಗೆ ಚಾಕು ತೋರಿಸಿ ಮನೆಯಲ್ಲಿದ್ದ ಸುಮಾರು 7.65 ಲಕ್ಷ ರೂ. ಮೌಲ್ಯದ ಆಭರಣಗಳು ಹಾಗೂ ಹಣವನ್ನ ದೋಚಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ತನಿಖೆ ನಡೆಸಿದ ಹೊನ್ನಾಳಿ ಠಾಣೆ ಸಿಪಿಐ ದೇವರಾಜ್ ಆರೋಪಿಯನ್ನ ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಲ್ಲದೆ, ವಿನುತಾಳನ್ನ ವಿಚಾರಣೆ ನಡೆಸುತ್ತಿದ್ದಾರೆ. ಮನೆಯಲ್ಲಿ ಮಾವ ಕಿರುಕುಳ ನೀಡುತ್ತಿದ್ದು, ಇದರಿಂದ ತಪ್ಪಿಸಿಕೊಳ್ಳಲು ಸಂಪತ್ ಕುಮಾರ್ ಮೊರೆ ಹೋಗಿದ್ದಳು. ಕೊಳ್ಳೆಗಾಲದ ಮಾಂತ್ರಿಕ ಜ್ಯೋತಿಷಿ ಪೂಜೆ ಮಾಡಿದರೆ ಎಲ್ಲವೂ ಸರಿಯಾಗುತ್ತೆ. ಹಣ ಬೇಕಾಗುತ್ತದೆ ಎಂದಿದ್ದ. ಮನೆಯಲ್ಲಿದ್ದ ಒಂದೊಂದೇ ಆಭರಣವನ್ನು ಜ್ಯೋತಿಷಿಗೆ ಕೊಡಲಾರಂಭಿಸಿದ್ದಳು. ಈ ವಿಷಯ ಮರೆಮಾಚಲು ದರೋಡೆ ನಾಟಕವಾಡುವಲ್ಲಿ ಈಕೆಯೂ ಪಾತ್ರ ವಹಿಸಿದ್ದಳು ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ.




