ಜಿಲ್ಲಾ ಸುದ್ದಿದಾವಣಗೆರೆ

ಡ್ರೋಣ್ ಕಣ್ಗಾವಲಿನಲ್ಲಿ ದಾವಣಗೆರೆ ದುಗ್ಗಮ್ಮ, ಚೌಡೇಶ್ವರಿ ಜಾತ್ರೆ!

ದಾವಣಗೆರೆ: ನಗರ ದೇವತೆ ದುಗ್ಗಮ್ಮ ಜಾತ್ರೆ, ವಿನೋಬ ನಗರದ ಚೌಡೇಶ್ವರಿ ಜಾತ್ರೆ ಹಾಗೂ ಹೋಳಿ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸಬೇಕಿದೆ. ಯಾರಾದರೂ ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಇಂತಹದಕ್ಕೆ ಯಾರೂ ಅವಕಾಶ ಮಾಡಿಕೊಡಬೇಡಿ. ಇದರಿಂದ ದೇವಸ್ಥಾನದ ಆಡಳಿತ ಮಂಡಳಿಗೂ ತೊಂದರೆಯಾಗುತ್ತದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಖಡಕ್ ಎಚ್ಚರಿಕೆ ನೀಡಿದರು.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್, ಸರ್ಕಾರ ಹಾಗೂ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಾಣಿ ಬಲಿ ನಿಷೇಧವಿದ್ದು ದೇವಸ್ಥಾನದ ಆವರಣ ಹಾಗೂ ಸುತ್ತಲಿನ ಐದು ನೂರು ಮೀಟರ್ ಆವರಣದಲ್ಲಿ ಯಾವುದೇ ಪ್ರಾಣಿ ಬಲಿ ನಡೆಸುವುದು ಬೇಡ, ಸಂಪ್ರದಾಯದಂತೆ ಕೋಣನ ರಕ್ತವನ್ನು ಸಿರಂಜ್ ಮೂಲಕ ತೆಗೆದು ದೇವರಿಗೆ ಅರ್ಪಿಸೋಣ ಎಂದರು.

ಇನ್ನೂ ಬೇವಿನುಡಿಗೆಯ ಸೇವೆ ಕೂಡ ನಿಷೇಧವಿದ್ದು, ಬೇವಿನ ಎಸಳನ್ನು ದೇವಿಗೆ ಅರ್ಪಿಸುವ ಮೂಲಕ ಹರಕೆ ತೀರಿಸಿ. ಹಬ್ಬಗಳ ಹೆಸರಿನಲ್ಲಿ ನಡೆಯುವ ಮೂಢನಂಬಿಕೆಗಳನ್ನು ಧಿಕ್ಕರಿಸುವ ಮೂಲಕ ಹೊಸತನಕ್ಕೆ  ನಾಂದಿ ಹಾಡೋಣ ಎಂದು ತಿಳಿಸಿದರು. ಪ್ರಾಣಿಬಲಿ ನಿಷೇಧ ಕಾಯಿದೆಯು ಅತ್ಯಂತ ಕಠಿಣವಾಗಿದ್ದು,  ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಜಾತ್ರಾ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು. ಮಹಾನಗರ ಪಾಲಿಕೆ ಮಹಾಪೌರರಾದ ಜಯಮ್ಮ ಗೋಪಿನಾಯ್ಕ ಮಾತನಾಡಿ ಜಾತ್ರೆಗಳು ಸುಗಮವಾಗಿ ನಡೆಯಲು ಪಾಲಿಕೆ ವತಿಯಿಂದ ಎಲ್ಲಾ ನೆರವು ನೀಡಲಾಗುವುದು, ಎಲ್ಲರೂ ಪರಸ್ಪರ ಸಹಕರಿಸಿ ಜಾತ್ರೆಗಳು ಅದ್ದೂರಿಯಾಗಿ ನಡೆಯುವಂತೆ ನೋಡಿಕೊಳ್ಳೋಣವೆಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ ಎರಡೂ ಜಾತ್ರಾ ಮಹೋತ್ಸವಗಳು ಯಶಸ್ವಿಯಾಗಿ ನಡೆಯಲಿ. ಟ್ರಾಫಿಕ್ ಸಮಸ್ಯೆಯಾಗದಂತೆ ಹಾಗೂ ಪಾರ್ಕಿಂಗ್ ಸಂಬಂಧಿಸಿದಂತೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುವುದು. ಎಲ್ಲಾ ಕಡೆ ಮಾರ್ಗ ಫಲಕಗಳನ್ನು ಹಾಕಲಾಗುವುದು, ಸಾಕಷ್ಟು ಕಸದ ರಾಶಿ ಬೀಳುವುದರಿಂದ ದೇವಸ್ಥಾನದ ಆಡಳಿತ ಮಂಡಳಿಯವರು ಎಲ್ಲಾ ಕಡೆ ಕಸದ ಬುಟ್ಟಿಗಳನ್ನಿಡಲಿ, ರಸ್ತೆಗಳು ಕಿರಿದಾಗಿದ್ದು ವ್ಯಾಪಾರಿಗಳು ಹೆಚ್ಚು ರಸ್ಥೆ ಮೇಲೆ ಅಂಗಡಿಗಳನ್ನು ಇಡುವುದನ್ನು ತಡೆಯಬೇಕು ಹಾಗೂ 280 ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗುವುದು. ಡ್ರೋಣ್ ಕ್ಯಾಮರಾಗಳು ಕಣ್ಗಾವಲು ಇರಲಿವೆ, ದೇವಸ್ಥಾನದ ವತಿಯಿಂದ ಹೆಚ್ಚು ಸ್ವಯಂ ಸೇವಕರನ್ನು ನೀಡಿ ಹಾಗು ಅವರಿಗೆ ಐ.ಡಿ ಕಾರ್ಡ್‍ಗಳನ್ನು ನೀಡಿ ಎಂದರು.

ಮುಖಂಡರಾದ ಚನ್ನಬಸಪ್ಪ ಗೌಡ್ರು ಮಾತನಾಡಿ ಜಾತ್ರೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಹಕಾರ ನೀಡಿದ್ದು, ಕೊರೋನಾ ಮಾರ್ಗಸೂಚಿಗಳಂತೆ ಜಾತ್ರೆ ಆಚರಿಸೋಣ, ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು ಅವರಿಗೆ ಎಲ್ಲಾ ವ್ಯವಸ್ಥಗಳನ್ನು ಮಾಡಿಕೊಡಬೇಕೆಂದರು,  ಮಹಾನಗರ ಪಾಲಿಕೆ ಕಟ್ಟಡಗಳಿಗೆ ಸುಣ್ಣ ಬಣ್ಣ, ಉತ್ತಮ ರಸ್ಥೆ, ನೀರಿನ ವ್ಯವಸ್ಥೆ ಮಾಡಲಿ ಎಂದರು. ಮುಖಂಡರಾದ ಶ್ರೀನಿವಾಸ್ ದಾಸ ಕರಿಯಪ್ಪ ಮಾತನಾಡಿ ಜಿಲ್ಲಾಡಳಿತದ ಆದೇಶದಂತೆ ಜಾತ್ರೆ ಮಾಡಲು ನಮ್ಮ ಸಮ್ಮತಿ ಇದೆ, ಜಾತ್ರೆ ಯಶಸ್ಸಿನಲ್ಲಿ ಪಾಲಿಕೆಯ ಪಾತ್ರ ಬಹಳಷ್ಟಿದೆ ಎಂದರು. ಸಾದಿಕ್ ಪೈಲ್ವಾನ್ ಮಾತನಾಡಿ ದಾವಣಗೆರೆಯಲ್ಲಿ ಯಾವುದೇ ಹಬ್ಬ ಜಾತ್ರೆಗಳು ಸೌಹಾರ್ದತೆಯಿಂದ ನಡೆಯುತ್ತವೆ.‌ ನಮ್ಮಸಂಪೂರ್ಣ ಸಹಕಾರ ಇರಲಿದೆ ಎಂದರು. ದೂಡಾ ಮಾಜಿ ಅಧ್ಯಕ್ಷರಾದ ಯಶವಂತ ರಾವ್ ಜಾಧವ್ ಮಾತನಾಡಿ, ಎಲ್ಲಾ ಕೋಮಿನವರೂ ಅತ್ಯಂತ ಅನ್ಯೋನ್ಯವಾಗಿ ಜಾತ್ರೆ ಆಚರಿಸುತ್ತೇವೆ, ಆದರೂ ಎಲ್ಲಾ ಕೋಮಿನಲ್ಲೂ ಕಿಡಿಗೇಡಿಗಳಿರುತ್ತಾರೆ ಅಂತಹವರಿಗೆ ಎಚ್ಚರಿಕೆ ನೀಡಿ ಎಂದರು. ಒಟ್ನಲ್ಲಿ ಪೊಲೀಸ್ ಮತ್ತು ಜಿಲ್ಲಾಡಳಿತದ ಸರ್ಪಗಾವಲಿನಲ್ಲಿ ಈ ಬಾರಿ ದಾವಣಗೆರೆ ದುಗ್ಗಮ್ಮ ಜಾತ್ರೆ ವೈಭವವಾಗಿ ನಡೆಯಲಿದೆ. ಸಾರ್ವಜನಿಕರ ಸಹಕಾರದಿಂದಷ್ಟೆ ಯಶಸ್ವಿ ಸಾಧ್ಯ.

Related Articles

Leave a Reply

Your email address will not be published. Required fields are marked *

Back to top button