ಬಿಪಿನ್ ರಾವತ್ ದೇಶಕ್ಕೆ ಗಂಡಾಂತರವಾಗದಂತೆ ನೋಡಿಕೊಂಡಿದ್ದರು: ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ: ತಮಿಳುನಾಡಿನಲ್ಲಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಭಾರತೀಯ ಸೇನಾ ಪಡೆಯ ಮುಖ್ಯಸ್ಥರಾದ ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ ಹದಿಮೂರು ಮಂದಿ ಮೃತಪಟ್ಟಿದ್ದು, ದೇಶವೇ ಕಣ್ಣೀರು ಸುರಿಸುತ್ತಿದೆ. ಇನ್ನು ದಾವಣಗೆರೆಯಲ್ಲಿ ಮಾತನಾಡಿದ ಕಾಂಗ್ರೆಸ್ ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು, ಸೇನೆ ಬಲಪಡಿಸುವಲ್ಲಿ ಬಿಪಿನ್ ರಾವತ್ ರ ಕೊಡುಗೆ ಅಪಾರ. ಅವರನ್ನು ಕಳೆದುಕೊಳ್ಳುವ ಮೂಲಕ ದೇಶಕ್ಕೆ ಭಾರೀ ನಷ್ಟವಾಗಿದೆ ಎಂದು ಹೇಳಿದರು.
ಬಿಪಿನ್ ರಾವತ್ ಮತ್ತು ಅವರ ಪತ್ನಿ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಭಾರತೀಯ ಸೇನೆ ಬಲಪಡಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದ ಬಿಪಿನ್ ರಾವತ್ ಅವರು ಅತ್ಯಾಧುನಿ ಶಸ್ತ್ರಾಸ್ತ್ರಗಳನ್ನು ಖರೀದಿಸಿದ್ದರು. ಈ ಮೂಲಕ ಸೇನೆ ಬಲಿಷ್ಠಗೊಳ್ಳುವಂತೆ ಮಾಡಿದ್ದರು. ವಿರೋಧಿಗಳು ನಮ್ಮ ಮೇಲೆ ದಾಳಿ ಆಗುವುದನ್ನು ತಡೆದಿದ್ದರು. ಚೀನಾ, ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದ್ದರಲ್ಲದೇ, ಹೆದರಿಸುವಂತ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಅಂಥ ಮಹಾನ್ ಚೇತನ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದು ನೋವು ತಂದಿದೆ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ವಿಶ್ವಾಸ ಇದ್ದು, ಮತದಾರರ ನಮಗೆ ಮತ ಹಾಕಲಿದ್ದಾರೆ. ಈಗ ಚುನಾವಣೆ ಬಂದರೆ ಎಲ್ಲರೂ ಹಣ ಹಂಚುತ್ತಾರೆ. ಕೇವಲ ಯಾವುದೋ ಒಂದು ಪಕ್ಷ ಮಾತ್ರವಲ್ಲ, ಎಲ್ಲರೂ ದುಡ್ಡು ಹಂಚ್ತಾರೆ. ದುಡ್ಡಿನ ಮೇಲೆ ಚುನಾವಣೆ ನಡೆಯುವುದು ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ನಾವು ಯಾರ ಬೆಂಬಲವನ್ನೂ ಕೇಳಲು ಹೋಗಿಲ್ಲ. ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ನನಗೇನೂ ಗೊತ್ತಿಲ್ಲ. ನಾವು ಯಾರನ್ನೂ ಬೆಂಬಲ ನೀಡಿ ಎಂಬುದಾಗಿ ಕೇಳಿಯೂ ಇಲ್ಲ, ನಮಗೆ ಬೇಕಾಗಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.




