ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಕಾಂಗ್ರೆಸ್ ಮುಖಂಡನ ಹತ್ಯೆ: ಮೂವರು ಹಂತಕರ ಬಂಧನ

ದಾವಣಗೆರೆ: ಅನೈತಿಕ ಸಂಬಂಧದ ಶಂಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡನನ್ನು ಬರ್ಬರವಾಗಿ ಕೊಂದು ಮಣ್ಣಲ್ಲಿ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಸವಾಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ಇಸ್ಮಾಯಿಲ್ ಖಾನ್, ಅಮ್ಜದ್ ಖಾನ್ ಹಾಗೂ ನೂರ್ ಅಹ್ಮದ್ ಬಂಧಿತ ಆರೋಪಿಗಳು. ಬೆಸ್ಕಾಂ ಗುತ್ತಿಗೆದಾರ ಹಾಗೂ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮುಖಂಡ ಜೈನುಲ್ಲಾ ಖಾನ್ ಹತ್ಯೆಗೀಡಾದವರು.
ಘಟನೆ ಹಿನ್ನೆಲೆ ಏನು..?
ವಾಕಿಂಗ್ ಗೆ ಹೋಗಿದ್ದ ಜೈನುಲ್ಲಾ ಖಾನ್ ಅವರು ಸೆಪ್ಟಂಬರ್ 2 ರಂದು ದಿಢೀರ್ ನಾಪತ್ತೆಯಾಗಿದ್ದರು. ಎಲ್ಲೇ ಹುಡುಕಾಡಿದರೂ ಪತ್ತೆ ಆಗಿರಲಿಲ್ಲ. ಅವರ ಪತ್ನಿ ಸಬ್ರಿನ್ ಬಾನು ಅವರು ಬಸವಾಪಟ್ಟಣ ಪೊಲೀಸರಿಗೆ ತನ್ನ ಪತಿ ಮನೆಗೆ ಬಂದಿಲ್ಲ ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಬಸವಾಪಟ್ಟಣ ಪೊಲೀಸರು ತನಿಖೆ ಕೈಗೊಂಡರು. ತನ್ನ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಅಮ್ಜದ್ ಖಾನ್ ತನ್ನ ಸಹೋದರ ಇಸ್ಮಾಯಿಲ್ ಖಾನ್ ಹಾಗೂ ನೂರ್ ಅಹ್ಮದ್ ಜೊತೆ ಸೇರಿಕೊಂಡು ಹಲ್ಲೆ ನಡೆಸಿ ಜೈನುಲ್ಲಾ ಖಾನ್ ಹತ್ಯೆ ಮಾಡಿ ಬಳಿಕ ಮಣ್ಣಲ್ಲಿ ಹೂತು ಹಾಕಿದ್ದರು. ಪೊಲೀಸರ ವಿಚಾರಣೆ ವೇಳೆ ಆರೋಪಿಗಳು ಈ ವಿಷಯ ಬಾಯ್ಬಿಟ್ಟಿದ್ದಾರೆ.
ಫೋನ್ ಟವರ್ ಆಧರಿಸಿ ಪೊಲೀಸರು ಈ ಪ್ರಕರಣ ಪತ್ತೆ ಹಚ್ಚಿದ್ದಾರೆ. ಇನ್ನು ಜೈನುಲ್ಲಾ ಖಾನ್ ಹಾಗೂ ಆರೋಪಿಗಳ ಮೊಬೈಲ್ ಟವರ್ ಸಮೀಪದಲ್ಲಿ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಹೊರಬಿದ್ದಿದೆ.
ಎಸ್ಪಿ ಸಿ. ಬಿ. ರಿಷ್ಯಂತ್, ಡಿವೈಎಸ್ಪಿ ಸಂತೋಷ್ ಮಾರ್ಗದರ್ಶನದಲ್ಲಿ ಚನ್ನಗಿರಿ ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್, ಬಸವಾಪಟ್ಟಣ ಎಸ್ ಐ ಭಾರತಿ ಕಂಕಣವಾಡಿ ಮತ್ತು ತಂಡವು ಪ್ರಕರಣವನ್ನು ಭೇದಿಸಿದೆ.




