ಧಾರವಾಡ : ಅಗ್ನಿಶಾಮಕ ದಳದ ಚಾಲಕ ಎಸ್ ನವೀನ್ಗೆ ಸಿಎಂ ಪದಕ

ಧಾರವಾಡ: ಕಳೆದ 2019 ರಲ್ಲಿ ನಡೆದಿದ್ದ ಕಟ್ಟಡ ದುರಂತದ ವೇಳೆ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ, ತಮ್ಮ ಜೀವದ ಹಂಗು ತೊರೆದು ಕರ್ತವ್ಯ ಪ್ರಜ್ಞೆ ಮೆರೆದಿದ್ದ, ಬೆಂಗಳೂರು ಹೆಬ್ಬಾಳದ ಅಗ್ನಿಶಾಮಕದಳದ ಚಾಲಕ ಎಸ್.ನವೀನ್ ಅವರಿಗೆ ಸಿಎಂ ಪದಕ ದೊರೆತಿದೆ.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜರುಗಿದ ಸಮಾರಂಭದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಿನ್ನದ ಪದಕ ಪ್ರದಾನ ಮಾಡಿದರು.
ಎಸ್.ನವೀನ ಅವರು ಕಳೆದ ಸುಮಾರು 14 ವರ್ಷಗಳಿಂದ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ವೃತ್ತಿಯ ಜೊತೆಯಲ್ಲಿಯೇ ಅಧಿಕಾರಿಗಳೊಂದಿಗೆ ಹಾಗೂ ತಾಂತ್ರಿಕ ಸಿಬ್ಬಂದಿಯೊಂದಿಗೆ ಅಗ್ನಿ ಅವಘಡ ಮತ್ತು ತುರ್ತು ಸೇವೆಯ ಸಂದರ್ಭದಲ್ಲಿ ಸಹಾಯ ಮಾಡುತ್ತಿದ್ದಾರೆ. 2019 ರಲ್ಲಿ ಧಾರವಾಡದಲ್ಲಿ ನಡೆದ ಕಟ್ಟಡ ದುರಂತದ ಘಟನೆಯಲ್ಲಿ ಹಲವಾರು ಜೀವಗಳನ್ನು ರಕ್ಷಿಸಿದ ಕೀರ್ತಿ ಇವರದ್ದಾಗಿತ್ತು. ಇವರ ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಈಗ ಎಸ್ ನವೀನ್ರವರಿಗೆ ಮುಖ್ಯಮಂತ್ರಿ ಪದಕ ನೀಡಲಾಗಿದೆ.




