ಸೌಲಭ್ಯವಿಲ್ಲದ ಕೆ.ಆರ್.ಐ.ಡಿ.ಎಲ್ ಕಾಮಗಾರಿ : ಅಣಕು ನಾಮಫಲಕ ಹಿಡಿದು ಪ್ರತಿಭಟನೆ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಅತಿವೃಷ್ಟಿಗೆ ಬಾಧಿತವಾದ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಯನ್ನು ತಂತ್ರಜ್ಞರು,ಸಿಬ್ಬಂದಿ,ಸೌಲಭ್ಯವಿಲ್ಲದ ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಕಛೇರಿಯಲ್ಲಿ ಕುರ್ಚಿ, ಮೇಜು, ಓಡಾಡಲು ಒಂದು ವಾಹನ ಬಿಟ್ಟರೆ ನಿಯಮದ ಪ್ರಕಾರ ಇರಬೇಕಾದ ಯಾವುದೂ ಸೌಲಭ್ಯ ಇಲ್ಲ ಎಂದು ಸಿವಿಲ್ ಗುತ್ತಿಗೆದಾರರ ಸಂಘದ ಕಾರವಾರ ತಾಲೂಕು ಘಟಕದ ಅಧ್ಯಕ್ಷ ಮಾಧವ ನಾಯಕ ಆರೋಪಿಸಿ ಅಣಕು ನಾಮಫಲಕ ಹಿಡಿದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರವಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ವಿಶೇಷ ನಿಧಿ ಅಡಿಯಲ್ಲಿ ಜಿಲ್ಲೆಗೆ ಮಂಜೂರಾದ 70 ಕೋಟಿ ರೂ.ಅನುದಾನದ ಪೈಕಿ ಕರಾವಳಿ ಭಾಗಕ್ಕೆ ಮೀಸಲಿಟ್ಟ 55 ಕೋಟಿ ರೂ.ಮೊತ್ತದ ಕಾಮಗಾರಿಯನ್ನು ಈ ಭಾಗದ ಜನಪ್ರತಿನಿಧಿಗಳು ಕೆ.ಆರ್.ಐ.ಡಿ.ಎಲ್.ಗೆ ಕೊಡಿಸಿ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಹಿಂದೆ ಜಿಲ್ಲಾ ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಭೂ ಸೇನಾ ನಿಗಮಕ್ಕೆ ಯಾವುದೇ ಕೆಲಸ ಕೊಡಬಾರದು ಎಂದು ಕಪ್ಪು ಪಟ್ಟಿಯಲ್ಲಿ ಇಟ್ಟು ಠರಾವು ಮಾಡಲಾಗಿತ್ತು.ಈಗ ಹೆಸರು ಬದಲಾಯಿಸಿ ಕೆ.ಆರ್.ಐ.ಡಿ.ಎಲ್. ಎಂದು ನಾಮಕರಣ ಮಾಡಲಾಗಿದೆ.ಅಧಿಕಾರಿಗಳು ನಿಯಮ ಉಲ್ಲಂಘಿಸಿ ಕಾಮಗಾರಿ ಗುತ್ತಿಗೆ ನೀಡುತ್ತಿದ್ದಾರೆ ಎಂದರು.
ಕೆ.ಆರ್.ಐ.ಡಿ.ಎಲ್.ಸಂಸ್ಥೆಯಲ್ಲಿ ಕಾಮಗಾರಿ ನಡೆಸಲು ಬೇಕಿರುವ ಯಾವ ಸೌಲಭ್ಯವೂ ಇಲ್ಲ ಎಂಬುದು ಮಾಹಿತಿ ಹಕ್ಕಿನಿಂದ ಮಾಹಿತಿ ದೊರಕಿದೆ. ಆದರೂ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರು ಇದೇ ಸಂಸ್ಥೆಗೆ ಕಾಮಗಾರಿ ನೀಡಲು ಶಿಫಾರಸ್ಸು ಮಾಡುತ್ತಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ ಎಂದರು.




