ಕೋವಿಡ್: ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ನರವು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರ ಮಕ್ಕಳು ದುಸ್ಥಿತಿಯಲ್ಲಿದ್ದು, ಅಂತಹ ಮಕ್ಕಳ ಪಾಲನೆ-ಪೋಷಣೆ ಅಗತ್ಯದ ಆಧಾರದಲ್ಲಿ ಪ್ರಾಯೋಜಕತ್ವ ಕಾರ್ಯಕ್ರಮದಡಿ ಪ್ರತೀ ತಿಂಗಳು ರೂ.1000 ನೆರವು ನೀಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆಎನ್ ರಮೇಶ್ ತಿಳಿಸಿದ್ದಾರೆ.
ಸುಮಾರು 220 ಮಕ್ಕಳು ತಮ್ಮ ಏಕಪೋಷಕರನ್ನು ಕಳೆದುಕೊಂಡಿದ್ದಾರೆ. ಬಾಲಸ್ವರಾಜ್ ವೆಬ್ ಪೋರ್ಟಲ್ನಲ್ಲಿ 170 ಮಕ್ಕಳ ವಿವರ ದಾಖಲಿಸಿದ್ದು, ಅವರ ಪೋಷಣೆ ಕುರಿತು ಕ್ರಮ ವಹಿಸಲಾಗುತ್ತಿದೆ. ಪೋಷಕರನ್ನು ಕಳೆದುಕೊಂಡ ಮಕ್ಕಳ ಕ್ಷೇಮಾಭಿವೃದ್ಧಿಗೆ ಹಾಗೂ ಕೋವಿಡ್ 19 ರೋಗದಿಂದ ಸೋಂಕಿತ ಮತ್ತು ಬಾಧಿತ ಮಕ್ಕಳ ಆರೈಕೆಗೆ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಜೆಜೆಎಫ್ ಖಾತೆಯನ್ನು ತೆರೆಯಲಾಗಿದೆ. ಕೋವಿಡ್ ಅಲ್ಲದ ಕಾರಣಗಳಿಂದ 33 ಮಕ್ಕಳು ಅನಾಥರಾಗಿದ್ದಾರೆ. ಈ ಮಕ್ಕಳಿಗೆ ಪ್ರತೀ ತಿಂಗಳು 3500 ಆರ್ಥಿಕ ನೆರವು ನೀಡಲಾಗುತ್ತದೆ ಎಂದರು.
ಜಿಲ್ಲೆಯ ಕಾರ್ಪೊರೇಟ್ ಸಂಸ್ಥೆಗಳು, ಸಹೃದಯಿ ದಾನಿಗಳು ತಮ್ಮ ಕೈಲಾದ ಸಹಾಯ ಮಾಡಿದಲ್ಲಿ ಅನುದಾನವನ್ನು ಆರ್ಥಿಕ ಸಂಕಷ್ಟ ಸ್ಥಿತಿಯಲ್ಲಿರುವ ಮಕ್ಕಳ ವಿದ್ಯಾಭ್ಯಾಸ, ಆಹಾರ, ಆರೋಗ್ಯ ಮತ್ತು ತುರ್ತು ವೈದ್ಯಕೀಯ ವೆಚ್ಚಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕಂಡುಬಂದ 22 ಬಾಲ್ಯವಿವಾಹ ದೂರುಗಳಲ್ಲಿ 11 ಬಾಲ್ಯವಿವಾಹ ಪ್ರಕರಣಗಳನ್ನು ತಡೆಯಲಾಗಿದೆ. ಉಳಿದ 11 ಬಾಲ್ಯವಿವಾಹ ಜರುಗಿದ್ದು, ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿವೆ. ಮಹಿಳೆಯರು ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ವೈದ್ಯಕೀಯ, ಪೊಲೀಸ್, ಕಾನೂನು ಸೇವೆ. ಆಪ್ತಸಮಾಲೋಚನೆ ನೀಡುವ ಉದ್ದೇಶದಿಂದ ಜಿಲ್ಲಾ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಒನ್ ಸ್ಟಾಫ್ ಸೆಂಟರ್ ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.




