ರಾಜಕೀಯ ಮತ್ತು ಬದುಕಿನಲ್ಲಿ ನಿವೃತ್ತಿ ಇರುವುದಿಲ್ಲ: ಬಿ ಎಲ್ ಶಂಕರ್

ಚಿಕ್ಕಮಗಳೂರು: ರಾಜಕಾರಣ ಮತ್ತು ಬದುಕಿನಲ್ಲಿ ನಿವೃತ್ತಿ ಎಂಬುದು ಇರುವುದಿಲ್ಲ ಎಂದು ರಾಜ್ಯ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ. ಬಿಎಲ್ ಶಂಕರ್ ಅಭಿಪ್ರಾಯಿಸಿದರು.
ಮಾಜಿ ಶಾಸಕ ಐ ಬಿ ಶಂಕರ್ ಅವರ 77ನೇ ಜನ್ಮದಿನದ ಅಂಗವಾಗಿ ನಗರದ ಎಂಎಲ್ವಿ ರೋಟರಿ ಸಭಾಂಗಣದಲ್ಲಿ ಭಾರತ ಸೇವಾದಳದ ಜಿಲ್ಲಾ ಘಟಕ ಸನ್ಮಾನ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜಕಾರಣ ಮಾಡುವವರು ನಿವೃತ್ತರಾಗುವುದಿಲ್ಲ. ಆದರೆ ಕ್ರಮೇಣ ಮರೆಯಾಗಿ ಹೋಗುತ್ತಾರೆ. ತಿಳಿದವರು ಮತ್ತು ಅನುಭವಿಗಳ ಪ್ರಕಾರ ಬದುಕು ಎಂದರೆ ಸಾವಿನೆಡೆಗೆ ನಿರಂತರವಾಗಿ ಪಯಣಿಸುವುದಷ್ಟೇ ಆಗಿದೆ. ನಾವು ಬದುಕಿದ್ದೆವು ಎನ್ನುವುದಕ್ಕಿಂತ ಹೇಗೆ ಬದುಕಿದ್ದೆವು ಎಂಬುದು ಮುಖ್ಯವಾಗುತ್ತದೆ ಎಂದು ನುಡಿದರು.
ವಿಧಾನಪರಿಷತ್ ಉಪಸಭಾಪತಿ ಎಂ ಕೆ ಪ್ರಾಣೇಶ್ ಮಾತನಾಡಿ, ರಾಜಕಾರಣದಲ್ಲಿ ಶುದ್ಧಹಸ್ತರಾದವರು ತಮ್ಮ ಜೀವನದ ಅನುಭವ ವಿಚಾರಧಾರೆಗಳನ್ನು ಪುಸ್ತಕ ರೂಪದಲ್ಲಿ ಹೊರತರಬೇಕಾಗಿದೆ ಎಂದು ಸಲಹೆ ನೀಡಿದರು.
ಶೃಂಗೇರಿ ಶಾಸಕ ಟಿ ಡಿ ರಾಜೇಗೌಡ ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ, ಕಬ್ಬಿನಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯರಾಗಿ ರಾಜಕೀಯ ಪ್ರವೇಶಿಸಿರುವ ಐ ಬಿ ಶಂಕರ್ ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿಯುವ ಮೂಲಕ ಜಿಲ್ಲೆಯಲ್ಲಿ ಗುರುತರ ಕೆಲಸ ಮಾಡಿದ್ದಾರೆ ಎಂದರು.
ಮಾಜಿ ಶಾಸಕ ಐ ಬಿ ಶಂಕರ್ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.




