ಅಲ್ಪಸಂಖ್ಯಾತರನ್ನೇ ಸಿಎಂ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಲಿ: ಸಿ ಟಿ ರವಿ

ಚಿಕ್ಕಮಗಳೂರು: ಅಲ್ಪಸಂಖ್ಯಾತರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಕಾಳಜಿಯಿದ್ದರೆ ಅವರನ್ನು ಮುಂದಿನ ಸಿಎಂ ಅಭ್ಯರ್ಥಿಯನ್ನಾಗಿ ಘೋಷಿಸಲಿ ಎಂದು ಶಾಸಕ ಸಿ.ಟಿ.ರವಿ ಮಾತಿನ ಬಾಣದ ಮೂಲಕ ಕಾಂಗ್ರೆಸ್ ನಾಯಕರನ್ನು ಚುಚ್ಚಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ದಲಿತರಿಗೆ ಮೋಸ ಮಾಡಿಯಾಗಿದೆ. ಆದರೆ ಅಲ್ಪಸಂಖ್ಯಾತರಿಗೇಕೆ ಮೋಸ ಮಾಡುತ್ತಿದೆ? ಇವರಿಲ್ಲದೆ ಆ ಪಕ್ಷ ಠೇವಣಿ ಉಳಿಸಿಕೊಳ್ಳೋದು ಕಷ್ಟ. ಅಲ್ಪಸಂಖ್ಯಾತರು ಮೆಜಾರಿಟಿ ಇರುವ ಕಡೆ ಕಾಂಗ್ರೆಸ್ ಪಕ್ಷಕ್ಕೆ ಗೆಲುವಾಗುತ್ತಿದೆ. ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿ ಮಾಡಬೇಕಾದ ಅನಿವಾರ್ಯತೆ ಕಾಂಗ್ರೆಸ್ ಪಕ್ಷಕ್ಕಿದೆ. ಹೀಗಾಗಿ ಜಮೀರ್ ಅಹ್ಮದ್, ತನ್ವೀರ್ ಸೇಠ್, ಇಬ್ರಾಹಿಂ ಯಾರನ್ನಾದರೂ ಸಿಎಂ ಮಾಡುತ್ತೇವೆಂದು ಘೋಷಿಸಲಿ ಎಂದು ಹೇಳಿದರು.
ರಾಹುಲ್ ಗಾಂಧಿ ವಯನಾಡಲ್ಲಿ ಗೆಲ್ಲಲು ಅಲ್ಪಸಂಖ್ಯಾತರ ಬಲವೇ ಕಾರಣ. ಕಾಂಗ್ರೆಸ್ ಗೆದ್ದಿರುವ ಬಹುಪಾಲು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ಮೆಜಾರಿಟಿ ಇರೋದೆ ಗೆಲ್ಲಲು ಕಾರಣ. ಹೀಗಾಗಿ ಸಿಎಂ ಇಬ್ರಾಹಿಂ ಮಾತಿನಲ್ಲಿ ನ್ಯಾಯವಿದೆ ಅವರು ಮುಖ್ಯಮಂತ್ರಿ ಆಕಾಂಕ್ಷಿ ಇದ್ದಾರೆ. ಮೊನ್ನೆ ಅವರು ಹೇಳಿದ್ದನ್ನು ಗಮನಿಸಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿರುವ ತಮಗೇ ಸಿಎಂ ಸ್ಥಾನ ಕೊಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಈಗ ಅನೇಕ ಮಂದಿಯನ್ನು ಸಿಎಂ ಮಾಡಲು ಪೌರೋಹಿತ್ಯ ವಹಿಸುವವರು ಕಾಣಿಸಿದ್ದಾರೆಂದು ಅವರೇ ಹೇಳಿದ್ದಾರೆ. ಹಿಂದೆ ರಾಮಕೃಷ್ಣ ಹೆಗಡೆ, ದೇವೇಗೌಡ, ಜೆ.ಎಚ್.ಪಟೇಲ್, ಸಿದ್ದರಾಮಯ್ಯ ಇವರೆಲ್ಲಾ ಸಿಎಂ ಆಗುವಾಗ ಇಬ್ರಾಹಿಂ ಪೌರೋಹಿತ್ಯ ವಹಿಸಿರಲಿಲ್ಲವೇ ಎಂದು ವ್ಯಂಗ್ಯವಾಡಿದರು.




