ಕಾರ್ಮಿಕ ಇಲಾಖೆಯ ಆಹಾರ ಕಿಟ್ ಪಕ್ಷದ ಹೆಸರಲ್ಲಿ ಹಂಚಿಕೆ; ಸಿ ಟಿ ರವಿ ವಿರುದ್ಧ ಕಾಂಗ್ರೆಸ್ ಆರೋಪ

ಚಿಕ್ಕಮಗಳೂರು: ಕಾರ್ಮಿಕ ಇಲಾಖೆಯಿಂದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತ ಆಹಾರ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಂದ ವಿತರಿಸದೆ, ಶಾಸಕ ಸಿ.ಟಿ.ರವಿ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಆಹಾರದ ಕಿಟ್ ಗಳನ್ನು ವಿತರಿಸಿರುವುದು ಎಷ್ಟು ಸರಿ? ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಎಂ.ಸಂದೇಶ್ ಪ್ರಶ್ನಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿ, ಇಲಾಖೆಯಿಂದ ನೀಡುವ ಆಹಾರದ ಕಿಟ್ಗಳನ್ನು ಶಾಸಕ ಸಿ.ಟಿ.ರವಿ ಬಿಜೆಪಿ ಚಿಹ್ನೆಯುಳ್ಳ ವಸ್ತ್ರ ಧರಿಸಿ, ಫೋಟೋ ತೆಗೆಸಿಕೊಂಡು ತಮ್ಮ ಪಕ್ಷದಿಂದಲೇ ಕೊಡುತ್ತಿರುವಂತೆ ಬಿಂಬಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.
ಸರ್ಕಾರಕ್ಕೆ ಜನಸಾಮನ್ಯರು ಕಟ್ಟಿದ ತೆರಿಗೆ ಹಣದಿಂದ ಆಹಾರದ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಹೊರತು ಬಿಜೆಪಿ ಪಕ್ಷದ, ಅಥವಾ ಶಾಸಕರ ಸ್ವಂತ ಹಣದಿಂದಲ್ಲ. ಕಾರ್ಮಿಕರಿಗೆ ಹಂಚಬೇಕಾದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಂದ ಹಂಚಿಸಬೇಕಿತ್ತು. ಆದರೆ ಪಕ್ಷದ ಕಾರ್ಯಕರ್ತರನ್ನು ಸೇರಿಸಿ ಹಂಚಿದ್ದೇಕೆ? ಕ್ಷೇತ್ರದಲ್ಲಿ ಅಧಿಕಾರಿಗಳ ಕೊರತೆ ಇದೆಯಾ? ಹಾಗೇನಾದರೂ ಕೊರತೆಯಿದ್ದಲ್ಲಿ ಸರ್ಕಾರವೇ ನೇರ ಹೊಣೆಯಾಗಬೇಕು ಎಂದಿದ್ದಾರೆ.
ಶಾಸಕ ಸಿ.ಟಿ.ರವಿಯವರು ಇತ್ತೀಚೆಗೆ ಹೈಕೋರ್ಟ್ ನ್ಯಾಯಮೂರ್ತಿಗಳ ನಿಲುವನ್ನೆ ಪ್ರಶ್ನಿಸಿ, ಅತೀಬುದ್ಧಿವಂತಿಕೆ ಪ್ರದರ್ಶಿಸಿದ್ದಾರೆ. ಈಗ ಆಹಾರ ಕಿಟ್ ವಿತರಣೆಯಲ್ಲಿ ಮೇದಾವಿಯಂತೆ ವರ್ತಿಸಿರುವುದೇಕೆ? ಎಂದು ಕೇಳಿದ್ದಾರೆ.




