ಉಡುಪಿಜಿಲ್ಲಾ ಸುದ್ದಿ
ಕಲ್ಲಿಗೆ ಡಿಕ್ಕಿ ಹೊಡೆದ ಬೋಟ್ : ಅಪಾಯದಿಂದ ಪಾರಾದ ಮೀನುಗಾರರು

ಉಡುಪಿ: ಮೀನುಗಾರಿಕೆ ಮುಗಿಸಿ ಬಂದರಿಗೆ ವಾಪಾಸಾಗುತ್ತಿದ್ದ ಬೋಟೊಂದು ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.
ಭಾರತಿ ತಿಂಗಳಾಯ ಎಂಬವರಿಗೆ ಸೇರಿದ ಶ್ರೀ ನವಶಕ್ತಿ ಹೆಸರಿನ ಬೋಟು ಅ.25ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮೀನುಗಾರಿಕೆ ಮುಗಿಸಿ ವಾಪಾಸ್ಸು ಬರುತ್ತಿದ್ದ ವೇಳೆ, ಮಲ್ಪೆ ಬಂದರಿನಿಂದ ಸ್ವಲ್ಪ ದೂರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ಕಲ್ಲಿಗೆ ಬಡಿದಿದೆ.
ಇದರಿಂದ ಬೋಟಿನ ಅಡಿಭಾಗ ಸಂಪೂರ್ಣ ಹಾನಿಗೊಂಡು, ನೀರು ಬೋಟಿನ ಒಳಹೊಕ್ಕು ಸಂಪೂರ್ಣ ಮುಳುಗುವ ಸ್ಥಿತಿಗೆ ತಲುಪಿತ್ತು. ತಕ್ಷಣ ಸಮೀಪದಲ್ಲಿದ್ದ ಬೇರೆ ಹಡಗಿನವರು, ಬೋಟ್ನಲ್ಲಿದ್ದ ಮೀನುಗಾರರನ್ನು ರಕ್ಷಿಸಿ, ಬೋಟನ್ನು ಮಲ್ಪೆ ಬಂದರಿಗೆ ಎಳೆದು ತಂದಿದ್ದಾರೆ.
ಮೀನು, ಬಲೆ ಹಾಗೂ ಇನ್ನಿತರ ಸಲಕರಣೆಗಳು ಸಮುದ್ರ ಪಾಲಾಗಿದ್ದು, ಒಟ್ಟು 20 ಲಕ್ಷ ರೂ. ನಷ್ಟ ಉಂಟಾಗಿದೆ ಅಂತ ಅಂದಾಜಿಸಲಾಗಿದೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..




