ಉ.ಕನ್ನಡದಲ್ಲಿ ಹೆಚ್ಚುತ್ತಿರುವ ಬ್ಲಾಕ್ ಫಂಗಸ್; ಚಿಕಿತ್ಸೆಗೆ ತೊಡಕಾಗುತ್ತಿರುವ ವೈದ್ಯಕೀಯ ವ್ಯವಸ್ಥೆ

ವರದಿ: ತೇಜಸ್ವಿ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಏರಿಕೆ ಕಂಡ ಕೊರೋನಾ ಆರ್ಭಟ ಇಳಿಕೆಯತ್ತ ಸಾಗುತ್ತಿರುವಾಗಲೇ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಸೋಂಕಿನ ಸಂಖ್ಯೆಯಲ್ಲಿ ಏರಿಕೆ ಕಾಣತೊಡಗಿದೆ.ಜಿಲ್ಲೆಯಲ್ಲಿ ಈ ವರೆಗೆ ಬ್ಲಾಕ್ ಫಂಗಸ್ ಐದಕ್ಕೆ ಏರಿಕೆ ಕಂಡಿದೆ.
ಕಾರವಾರ,ಜೋಯಿಡಾ, ಹಳಿಯಾಳದಲ್ಲಿ ತಲಾ ಒಂದೊಂದು ಪ್ರಕರಣ ವರದಿಯಾದರೆ, ಅಂಕೋಲಾದಲ್ಲಿ ಒಂದೇ ದಿನದಲ್ಲಿ ಇಬ್ಬರಲ್ಲಿ ಬ್ಲಾಕ್ ಫಂಗಸ್ ಪತ್ತೆಯಾಗಿದೆ.ಸದ್ಯ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ವಿಶೇಷ ವಾರ್ಡ ಸಹ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.
ಆದರೆ ನುರಿತ ವೈದ್ಯರ ಸಮಸ್ಯೆ ಜೊತೆ ವೈದ್ಯಕೀಯ ಉಪಕರಣ ದ ವ್ಯವಸ್ಥೆ ಇಲ್ಲದ ಕಾರಣ ಬ್ಲಾಕ್ ಫಂಗಸ್ ಸೋಂಕಿತ ವ್ಯಕ್ತಿಗಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಗಿದೆ.
ಜಿಲ್ಲಾಡಳಿತ ಕ್ರಿಮ್ಸ್ ಕೋವಿಡ್ ವಾರ್ಡನಲ್ಲಿ ಇಬ್ಬರು ವೈದ್ಯರನ್ನ ಇದಕ್ಕಾಗಿ ಪ್ರತ್ಯೇಕವಾಗಿ ನೇಮಿಸಿದೆ.ಆದರೆ ಬ್ಲಾಕ್ ಫಂಗಸ್ ನ ಮೂರನೇ ಹಂತದ ಸೋಂಕಿತರಿಗೆ ಚಿಕಿತ್ಸೆ ನೀಡಿ ಶಸ್ತ್ರಚಿಕಿತ್ಸೆ ನೀಡಲು ವೈದ್ಯ ರಿಲ್ಲ.ಇನ್ನು ನ್ಯೂರೋ ಸರ್ಜನ್ ಸಹ ನೇಮಕ ಮಾಡಲಾಗಿಲ್ಲ. ಇನ್ನು ಸೋಂಕು ತೀವ್ರತೆಯ ಪತ್ತೆಗೆ ಜಿಲ್ಲೆಯಲ್ಲಿ ಎಮ್.ಆರ್.ಐ ಸ್ಕ್ಯಾನರ್ ಸಹ ಇಲ್ಲ.ಹೀಗಾಗಿ ನಿಯೋಜನೆ ಗೊಂಡ ವೈದ್ಯರಿಗೆ ಚಿಕಿತ್ಸೆ ನೀಡುವುದೇ ದೊಡ್ಡ ತೊಡಕಾಗಿದೆ.ಔಷಧ ಸಂಗ್ರಹ ವಿದ್ದರೂ,ಅದು ಅತ್ಯಲ್ಪವಾಗಿದೆ. ಸರ್ಕಾರದಿಂದ ಹೆಚ್ಚಿನ ಔಷಧಗಳು ಬರಬೇಕಿದೆ.
ಜಿಲ್ಲಾಧಿಕಾರಿ ಹೇಳುವುದೇನು ?
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಹೇಳುವಂತೆ ಜಿಲ್ಲೆಯಲ್ಲಿ ಬ್ಲಾಕ್ ಫಂಗಸ್ ಗೆ ಮೊದಲ ಹಂತದ ಸೋಂಕಿಗೆ ಮಾತ್ರ ಚಿಕಿತ್ಸೆ ನೀಡಬಹುದಾಗಿದೆ.ಈವರೆಗೆ ದಾಖಲಾದವರಲ್ಲಿ ಸೋಂಕಿನ ಪ್ರಮಾಣ ತೀವ್ರತೆ ಇದ್ದಿದ್ದರಿಂದ ಮಂಗಳೂರಿಗೆ ಶಿಫಾರಸ್ಸು ಮಾಡಲಾಗಿದೆ.ಕಾರವಾರದಲ್ಲಿ ಓರ್ವ ರೋಗಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ ಎಮ್.ಆರ್.ಐ. ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ.ಸರ್ಕಾರಕ್ಕೆ ಮನವಿ ಮಾಡಲಾಗಿದೆ.ನಮ್ಮಲ್ಲಿ ನ್ಯೂರೋ ಸರ್ಜನ್ ಕೊರತೆ ಇದೆ.ಮೂರನೆ ಹಂತದ ರೋಗಿಗಳು ಬಂದಾಗ ಆಪರೇಷನ್ ಮಾಡಬೇಕಾ ಗುತ್ತದೆ.ಹೀಗಾಗಿ ಮಂಗಳೂರಿಗೆ ಕಳುಹಿಸಲಾಗುತ್ತಿದೆ.ಸದ್ಯ ಔಷಧಿಗಳ ಕೊರತೆ ಇಲ್ಲ.ಬ್ಲಾಕ್ ಫಂಗಸ್ ಚಿಕಿತ್ಸೆಯ ಔಷಧಿಗಳಿಗೆ ಹೆಚ್ಚಿನ ದರ ಇರುವುದರಿಂದ ಇಲ್ಲಿ ದಾಖಲಾದ ನಂತರ ತರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಬ್ಲಾಕ್ ಫಂಗಸ್ ಪತ್ತೆಯೇ ಸವಾಲು !
ಜಿಲ್ಲೆಯಲ್ಲಿ ಈವರೆಗೆ ದಾಖಲಾದ ರೋಗಿಗಳಲ್ಲಿ ಬಹುತೇಕರು ಕಿಡ್ನಿ ಸಮಸ್ಯೆ, ಶುಗರ್ ನಂತಹ ಹಲವು ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಸೋಂಕಿತರಲ್ಲಿ ಮೊದಲ ಹಂತದಲ್ಲಿ ಗುರುತಿಸಲು ಹೋಮ್ ಐಸೋಲೇಷನ್ ಅಡ್ಡಿಯಾಗಿದೆ.ಬಹುತೇಕರು ತೀವ್ರತೆಗೊಂಡಾಗ ಆಸ್ಪತ್ರೆಗೆ ದಾಖಲಾಗುತ್ತಾರೆ.ಹೀಗೆ ದಾಖಲಾದಾಗ ವೈದ್ಯರಿಗೆ ಪತ್ತೆ ಹಚ್ಚಲು ವೈದ್ಯಕೀಯ ಉಪಕರಣಗಳ ಸಮಸ್ಯೆ ಎದುರಾಗಿದೆ.ಜೊತೆಗೆ ತಜ್ಞ ಶಸ್ತ್ರ ಚಿಕಿತ್ಸಕರ ನೇಮಕವಾಗದ ಹಿನ್ನೆಲೆಯಲ್ಲಿ,ಶಸ್ತ್ರ ಚಿಕಿತ್ಸೆ ನೀಡುವುದು ಸಾಧ್ಯವಾಗ ದಂತಾಗಿದೆ.ಹೀಗಾಗಿ ಅನಿವಾರ್ಯ ಕಾರಣದಿಂದ ಮಂಗಳೂರಿಗೆ ಕಳುಹಿಸಿಕೊ ಡುವಂತಾಗಿದೆ.
ಸದ್ಯ ಕಳೆದ ಮೂರು ದಿನಗಳಲ್ಲಿ ಐದು ರೋಗಿಗಳು ಬ್ಲಾಕ್ ಫಂಗಸ್ ಗೆ ತುತ್ತಾಗಿದ್ದಾರೆ. ಜಿಲ್ಲೆಯಲ್ಲಿ 3976 ಜನ ಹೋಮ್ ಐಸೋಲೇಷನ್ ನಲ್ಲಿ ಇದ್ದಾರೆ.564 ಜನ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ವರೆಗೆ ಜಿಲ್ಲೆಯಲ್ಲಿ 4540 ಸಕ್ರಿಯ ಸೋಂಕಿತರಿದ್ದಾರೆ.ಒಟ್ಟು 607 ಜನ ಕೊರೋನಾ ಖಾಯಿಲೆಗೆ
ಬಲಿಯಾಗಿದ್ದಾರೆ.




