ಭೂ ಒತ್ತುವರಿ ಮಾಡಿಲ್ಲ ಅಂದ್ರೆ ಸರ್ವೇ ಬಗ್ಗೆ ಸಾರಾ ಮಹೇಶ್ ಗೆ ಭಯ ಏಕೆ : ಹೆಚ್.ವಿಶ್ವನಾಥ್ ಪ್ರಶ್ನೆ

ಮೈಸೂರು : ಸಚಿವ ಎಸ್.ಟಿ.ಸೋಮಶೇಖರ್ ಸರ್ಕಾರದ ಒಂದು ಭಾಗ. ಸರ್ಕಾರಿ ಭೂ ಒತ್ತುವರಿ ಸರ್ವೇ ವಿಚಾರವಾಗಿ ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಚಿನ್ನ ಉಜ್ಜಿದಷ್ಟು ಹೊಳಪು ಬರುತ್ತದೆ. ನಡೆಯಲಿ ಮರು ಸರ್ವೇ, ಸತ್ಯ ಹೊರಬರಲಿ. ಸಾ.ರಾ.ಮಹೇಶ್ ಒತ್ತುವರಿ ಮಾಡಿಲ್ಲವಾದರೆ ಭಯ ಏಕೆ? ಒತ್ತುವರಿ ಮಾಡಿಕೊಂಡವರಿಗೆ ಸರ್ವೇಯ ಭಯವಿರುತ್ತದೆ. ಹಿಂದಿನ ಸರ್ವೇ ವರದಿ ಪ್ರಾಮಾಣಿಕವಾಗಿರಲಿಲ್ಲ. ಇದನ್ನು ನಾನು ಮೊದಲೇ ಹೇಳಿದ್ದೆ. ವರದಿ ಹೇಗೆ ನೀಡಿದರು ಎನ್ನುವುದು ಜನರಿಗೂ ಗೊತ್ತಿದೆ. ಎಸ್.ಟಿ.ಸೋಮಶೇಖರ್ ಸರ್ಕಾರದ ಭಾಗ. ಅವರು ಈ ರೀತಿ ಹೇಳಿಕೆ ನೀಡಬಾರದು. ಅಧಿಕಾರಿಗೆ ಸರ್ಕಾರವೇ ಅಧಿಕಾರ ನೀಡಿದೆ. ಆ ಅಧಿಕಾರ ಬಳಸಿ ಅವರು ಆದೇಶ ಮಾಡಿದ್ದಾರೆ. ಇದನ್ನು ವಿರೋಧಿಸುವುದು ಸರಿಯಲ್ಲ ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ದಶಪಥ ರಸ್ತೆ ವಿವಾದ ಕುರಿತು ಪ್ರತಿಕ್ರಿಯಿಸಿ, ಇವರು ಮುಂದೆ ಮೈಸೂರು ಕಟ್ಟಿಸಿದ್ದು ನಾನೇ ಎನ್ನುತ್ತಾರೆ. ಸಂಸದ ಪ್ರತಾಪ್ ಸಿಂಹ ತಮ್ಮ ಸ್ಥಾನಕ್ಕೆ ಗೌರವವಿಟ್ಟು ಮಾತನಾಡಲಿ. ಅವರು ಬರೆದಿರುವ ಪತ್ರವೂ ಸಂಸದರ ಸ್ಥಾನಕ್ಕೆ ಗೌರವ ತರುವಂತಿಲ್ಲ. ಹಿಂದಿನ ಸರ್ಕಾರದಲ್ಲೇ ರಸ್ತೆ ಯೋಜನೆಗೆ ದಾಖಲೆ ಇದೆ. ಹೀಗಾಗಿ, ಯೋಜನೆ ತಮ್ಮದೇ ಅಂತ ಹೇಳಿಕೊಳ್ಳುವುದು ಸರಿಯಲ್ಲ ಎಂದು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಬಸವರಾಜ ಬೊಮ್ಮಾಯಿ ಯಡಿಯೂರಪ್ಪ ಅವರ ನೆರಳಲ್ಲ. ಬೊಮ್ಮಾಯಿ ಅವರಿಗೆ ಅವರದೇ ಆದ ಸ್ವಂತಿಕೆ ಇದೆ. ಸಾಮಾಧಾನಕರವಾದ ಆಡಳಿತ ನೀಡುತ್ತಿದ್ದಾರೆ. ಬೊಮ್ಮಾಯಿ ಅವರ ಮಾತುಗಳು ಜನರಲ್ಲಿ ಭರವಸೆ ಮೂಡಿಸುತ್ತಿವೆ. ಜನರ ಬಳಿಗೆ ಅಭಿವೃದ್ಧಿಯೇ ಹೊರತು ಅಭಿವೃದ್ಧಿ ಸುತ್ತ ಜನರಲ್ಲ. ಈ ವಿಚಾರದಲ್ಲಿ ಬೊಮ್ಮಾಯಿ ಆಡಳಿತ ಸುಧಾರಿಸಿದೆ. ಮೊದಲು ಕುಟುಂಬ ಕೇಂದ್ರವಾಗಿ ಆಡಳಿತ ಹೋಗುತ್ತಿತ್ತು. ಈಗ ಜನ ಕೇಂದ್ರೀಕೃತವಾಗಿ ಸಾಗುತ್ತಿದೆ ಎಂದು ಬೊಮ್ಮಾಯಿ ಅವರನ್ನು ಹೊಗಳಿಸಿದರು.
ಮುಂದಿನ ಚುನಾವಣೆ ನೇತೃತ್ವದ ವಿಚಾರವಾಗಿ ಮಾತನಾಡಿ, ಯಾವುದೇ ಪಕ್ಷವಾದರೂ ಆಗಿನ ಮುಖ್ಯಮಂತ್ರಿ, ಪಕ್ಷದ ಅಧ್ಯಕ್ಷರನ್ನು ಸೇರಿಸಿಕೊಂಡು ಚುನಾವಣೆ ಎದರಿಸುತ್ತದೆ. ಯಾರು ಏನೇ ಹೇಳಿದರೂ ಮೇಟಿ ಎಂಬುವರು ಒಬ್ಬ ಬೇಕಾಗುತ್ತದೆ ಎಂದರು.
