ಕಾಂಗ್ರೆಸ್ನ ಸಮಾನ ಮನಸ್ಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ: ಶಾಸಕ ರೇಣುಕಾಚಾರ್ಯ

ದಾವಣಗೆರೆ: ಕಾಂಗ್ರೆಸ್ ನ ಸಮಾನ ಮನಸ್ಕರರು ಬಿಜೆಪಿ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಯಾರ್ಯಾರು ಕಾಂಗ್ರೆಸ್ ನಿಂದ ಬಿಜೆಪಿಗೆ ಬರುತ್ತಾರೆ ಎಂಬುದನ್ನು ಕಾದುನೋಡಿ ಎಂದು ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಹಲವಾರು ಜನ ಬಿಜೆಪಿಗೆ ಬರಲು ಲೈನ್ನಲ್ಲಿ ನಿಂತಿದ್ದಾರೆ. ಬಿಜೆಪಿ ತತ್ವ ಸಿದ್ಧಾಂತ ಒಪ್ಪಿಕೊಂಡು ಬರಲು ಸಿದ್ದರಾಗಿದ್ದಾರೆ. ಇಷ್ಟರಲ್ಲೆ ಎಲ್ಲ ಬದಲಾಗಲಿದೆ ಕಾದು ನೋಡಿ ಎಂದು ಹೊಸಬಾಂಬ್ ಸಿಡಿಸಿದ್ದಾರೆ. 2023 ಕ್ಕೆ ಕಾಂಗ್ರೆಸ್ ಧೂಳಿಪಟವಾಗುತ್ತೆ ಎಂದು ಹೇಳಿದ್ದಾರೆ.
ಇನ್ನು ಭಾರತ್ ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರೇಣುಕಾಚಾರ್ಯ, ಭಾರತ್ ಬಂದ್ ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದ್ದಾರೆ. ಜನರು ಈ ಫೇಕ್ ರೈತರ ಹೋರಾಟವನ್ನು ಬೆಂಬಲಿಸುವುದಿಲ್ಲ. ಇದಕ್ಕೆ ನಕಲಿ ಕಾಂಗ್ರೆಸ್ ಬೆಂಬಲವಾಗಿ ನಿಂತಿದೆ. ಬಿಜೆಪಿ ಕೇಂದ್ರ, ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿದೆ. ರೈತರು ಸೇರಿ ಎಲ್ಲ ವರ್ಗಗಳ ಅಭಿವೃದ್ಧಿಗೆ ಕಾರ್ಯಕ್ರಮ ನೀಡಿದೆ. ನೊಂದವರಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿದೆ. ಬಿಜೆಪಿ ಹಾಗೂ ಮೋದಿ ವರ್ಚಸ್ಸು ಕಂಡು ಕಾಂಗ್ರೆಸ್ ಹೋರಾಟದ ಹುನ್ನಾರ ನಡೆಸಿದ್ದು, ಈ ಹೋರಾಟಕ್ಕೆ ಯಾವ ಜನರೂ ಬೆಂಬಲಿಸಲ್ಲ ಎಂದು ವಾಗ್ದಾಳಿಯನ್ನ ನಡೆಸಿದ್ದಾರೆ.



