ಎಲ್ಲೂ ನೆಲೆಯಿಲ್ಲದೆ ಶಾಸಕ ಎನ್ ಮಹೇಶ್ ಬಿಜೆಪಿ ಸೇರ್ಪಡೆ: ಶಾಸಕ ಎಂಪಿ ಕುಮಾರಸ್ವಾಮಿ ಲೇವಡಿ

ಚಿಕ್ಕಮಗಳೂರು: ಕೊಳ್ಳೆಗಾಲ ಶಾಸಕ ಎನ್ ಮಹೇಶ್ ಅವರಿಗೆ ಎಲ್ಲೂ ನೆಲೆಯಿಲ್ಲದೆ ಬಿಜೆಪಿಗೆ ಬಂದು ಸೇರಿಕೊಂಡಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.
ಬಿಎಸ್ಪಿ ಪಕ್ಷದಲ್ಲಿದ್ದ ಅವರನ್ನು ಆ ಪಕ್ಷ ಉಚ್ಛಾಟನೆ ಮಾಡಿತ್ತು. ಕಾಂಗ್ರೆಸ್-ಜೆಡಿಎಸ್ ಪಕ್ಷಗಳೂ ಬಿಟ್ಟಾಕಿದೆ. ಎನ್ ಮಹೇಶ್ ಅವರು ಹಿಂದೂ ಧರ್ಮದ ಬಗ್ಗೆ ಹೀನಾಯವಾಗಿ ಬೈಯುತ್ತಲೇ ಬೆಳೆದವರು. ಮನುಧರ್ಮ ಎಂದು ಹೇಳುತ್ತಾ ಜಾತಿ, ಧರ್ಮ ಎತ್ತಿಕಟ್ಟಿ ಶಾಸಕರಾದವರು. ಜನರನ್ನು ಒಡೆದು ಶಾಸಕರಾಗಿದ್ದು, ಈಗ ಬಿಜೆಪಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಎನ್ ಮಹೇಶ್ ವಿರುದ್ಧ ಎಂಪಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.
ಹಿಂದೂ ಧರ್ಮ, ವೈದಿಕ ಧರ್ಮವನ್ನು ಬೈದಿದ್ದಕ್ಕೆ ಬಹುಮಾನವಾಗಿ ಮಂತ್ರಿ ಮಾಡುತ್ತಾರೆ ಎಂದೇನಿಲ್ಲ. ಹಿಂದೂ ಧರ್ಮವನ್ನು ಮನು ಧರ್ಮ ಎಂದವರನ್ನು ಮಂತ್ರಿ ಮಾಡಲು ವಿರೋಧವಿದೆ ಎಂದಿದ್ದಾರೆ.
ನಾನು ಮಂತ್ರಿಸ್ಥಾನ ಬೇಕೆಂದು ಪಟ್ಟು ಹಿಡಿದಿಲ್ಲ. ಹೆಚ್ಚು ಸರ್ವಿಸ್ ಮಾಡುವ ನಾನು ಸಂತೋಷವಾಗಿದ್ದೇನೆ. ಪಕ್ಷಕ್ಕಾಗಿ ದುಡಿದವರು ಮೂವರಿದ್ದೇವೆ. ಯಾರನ್ನಾದರೂ ಮಂತ್ರಿ ಮಾಡುತ್ತಾರೆ ಎಂದ ಅವರು, ನಾನು ಏನಾದರೂ ಹೇಳಿಕೆ ಕೊಟ್ಟಾಗ ಅದು ಪಕ್ಷಕ್ಕೆ ಎಚ್ಚರಿಕೆ ಕೊಟ್ಟಂತೆ ಭಾವಿಸುವುದೇ ಹೆಚ್ಚು. ಹೀಗಾಗಿ ಇನ್ನೇನೂ ಹೇಳಲಾರೆ ಎಂದು ತಿಳಿಸಿದರು.
