ನಾಯಕತ್ವ ಬದಲಾವಣೆಗೆ ಬಲಿಯಾಗುತ್ತಾರಾ ಬೆಳಗಾವಿ ‘ಸಾಹುಕಾರ’?

ವಿಶೇಷ ವರದಿ: ಮಲ್ಲಿಕ್ ಬೆಳಗಲಿ
ಬೆಳಗಾವಿ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಿಎಂ ಗದ್ದುಗೆಯಿಂದ ಇಳಿಯುವುದು ಖಾತ್ರಿ ಆಗಿದೆ. ಇದರ ಸೈಡ್ ಎಫೆಕ್ಟ್ ರಾಜ್ಯ ರಾಜಕೀಯದಲ್ಲಿ ದೊಡ್ಡದಾಗಿಯೇ ಪರಿಣಮಿಸಲಿದೆ. ಒಂದು ಕಡೆ ಯಡಿಯೂರಪ್ಪನವರ ಹಿಂಬಾಲಕರು ಇನ್ನೊಂದು ಕಡೆ ಅವರ ಕೃಪಾಕಟಾಕ್ಷದಿಂದ ಅಧಿಕಾರ ಚುಕ್ಕಾಣಿ ಹಿಡಿದವರು ನಾಯಕತ್ವ ಬದಲಾವಣೆ ನಂತರ ಕಠಿಣ ದಿನಗಳನ್ನು ಎದುರಿಸುವುದು ನಿಶ್ಚಿತ ಎನ್ನುವಂತೆ ಕಾಣುತ್ತಿದೆ.
ಗಡಿನಾಡು ಬೆಳಗಾವಿ ಮಟ್ಟದಲ್ಲಿ ಬಿಎಸ್ವೈ ಬದಲಾವಣೆ ನಂತರ ಆಗಬಹುದಾದ ಪರಿಣಾಮ ನೋಡುವುದಾದರೆ, ಸರ್ಕಾರ ರಚಿಸಿದ ಸಾಹುಕಾರನಿಂದ ಹಿಡಿದು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆದುಕೊಂಡಿರುವ ಹಲವರಿಗೆ ಈಗ ಮೂಲೆಗುಂಪು ಆಗುವ ಭಯ ಶುರುವಾಗಿದೆ ಎನ್ನಲಾಗುತ್ತಿದೆ. ಯಾಕಂದ್ರೆ ಹಲವು ವರ್ಷಗಳಿಂದ ಬೆಳಗಾವಿ ಲಿಂಗಾಯತ ಪಂಚಮಸಾಲಿ ನಾಯಕರು ಜಿಲ್ಲೆಯಲ್ಲಿ ಸ್ಪಷ್ಟವಾದ ಹಿಡಿತ ಸಾದಿಸಲು ವಿಫಲರಾಗಿದ್ದರು. ಇದಕ್ಕೆ ಕಾರಣ ಹುಡುಕುತ್ತ ಹೋದರೆ ಜಾರಕಿಹೊಳಿ ಕುಟುಂಬದ ರಾಜಕೀಯ ಹಿಡಿತ ಹಾಗೂ ಪ್ರತಿ ಸರ್ಕಾರದಲ್ಲಿ ಅವರಿಗೆ ಸಿಕ್ಕುವ ಪ್ರಬಲ ಹುದ್ದೆಗಳು ಎನ್ನಬಹುದು.
ನಿನ್ನೆ ಕೂಡ ಬಿಜೆಪಿ ನಾಯಕರ ಸಭೆಯಲ್ಲಿ ರಮೇಶ್ ಜಾರಕಿಹೊಳಿ ನೇರವಾಗಿ ಭಾಗವಹಿಸಿಲ್ಲ. ಸಭೆಯ ನಂತರ ಪ್ರತ್ಯೇಕವಾಗಿ ಸಹೋದರನ ಜೊತೆ ಬಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾತ್ ಜೊತೆ ಚರ್ಚಿಸಿದ್ದಾರೆ. ಈಗಾಗಲೇ ಸಿಡಿ ಕೇಸ್ನಲ್ಲಿ ಸಿಲುಕಿರುವ ಶಾಸಕ ರಮೇಶ್ ಜಾರಕಿಹೊಳಿಗೆ ಯಡಿಯೂರಪ್ಪ ನಿರ್ಗಮನ ನಂತರ ಸಿಡಿ ಕೇಸ್ ನಲ್ಲಿ ಸರ್ಕಾರ ಮಟ್ಟದಲ್ಲಿ ಬೆಂಬಲ ಸಿಗುವುದು ಅನುಮಾನ ಹಾಗೂ ಮಂತ್ರಿ ಆಗುವುದು ಕೂಡ ಎಂದು ಹೇಳಲಾಗುತ್ತಿದೆ
ಹೊಸ ಸಿಎಂ ನಂತರ ತಮ್ಮ ಕೋಟೆಯನ್ನು ರಕ್ಷಿಸಿಕೊಳ್ಳಲು ಬೇಕಾದ ತಯಾರಿಯನ್ನು ಅವರು ಮಾಡಿಕೊಂಡಿದ್ದಾರೆ ಎಂಬ ಮಾತುಗಳಿವೆ. ತಮ್ಮ ಮಗ ಹಾಗೂ ಅಳಿಯನಿಗೆ ಈಗಾಗಲೇ ಮುಂದಿನ ಚುನಾವಣೆಗೆ ತಯಾರಿ ನಡೆಸುವಂತೆ ಸೂಚನೆ ನೀಡಿದ್ದಾರೆ. ಇನ್ನು ತಾವು ಸಿಡಿ ಕೇಸ್ ನಲ್ಲಿ ಸಿಲುಕಿದರು ಕೂಡ ತಮ್ಮ ವಿರೋಧಿಗಳನ್ನ ಕಟ್ಟಿಹಾಕಲು ಎಲ್ಲಾ ಸಿದ್ಧತೆ ನಡೆದಿಸಿದಂತಿದೆ.
ಮಿತ್ರ ಮಂಡಳಿ ನಾಯಕರಾಗಿದ್ದ ಶಾಸಕ ರಮೇಶ್ ಜಾರಕಿಹೊಳಿ ಅಧಿಕಾರ ಹೋದ ನಂತರ ಅವರಿಂದ ಕಡೆಗಣಿಸಲ್ಪಟ್ಟಿದ್ದಾರೆ. ಸಿ ಪಿ ಯೋಗೀಶ್ವರ್ ಸ್ನೇಹ ಮಾತ್ರ ಈಗ ಆಶಾಕಿರಣ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜೊತೆ ಕೂಡ ತಮ್ಮ ಮುಂದಿನ ನಡೆ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಬದಲಾವಣೆ ನಂತರ ತಾವು ತಟಸ್ಥ ನೀತಿ ಅನುಸರಿಸುವ ಮಾಹಿತಿ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಹೊಸ ಸಿಎಂ ಬಂದರೆ ತಮಗೆ ಸ್ಥಾನಮಾನ ನೀಡುವುದು ಹಾಗೂ ಸಿಡಿ ಕೇಸ್ ನ ಸಹಕಾರದ ಬಗ್ಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈಗಾಗಲೇ ಪ್ರಬಲ ಪಂಚಮಸಾಲಿ ಲಿಂಗಾಯತ ನಾಯಕರ ಹುಸಿ ಕೋಪಕ್ಕೆ ತುತ್ತಾಗಿರುವ ಶಾಸಕ ರಮೇಶ್ ಜಾರಕಿಹೊಳಿ, ಸದ್ಯ ಜಾಗರೂಕ ಹೆಜ್ಜೆಯಿಡುತ್ತಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ತಮ್ಮ ಸ್ಥಾನಮಾನ ನಿರ್ಧಾರವಾದ ನಂತರ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಕೂಡ ದಟ್ಟವಾಗಿದೆ.




