ಬೆಲೆ ಏರಿಕೆಗೆ ಖಂಡನೆ; ಗೋಕಾಕ್ನಲ್ಲಿ ಕಾಂಗ್ರೆಸ್ ಸೈಕಲ್ ಜಾಥಾ

ಗೋಕಾಕ್: ಕೇಂದ್ರ, ರಾಜ್ಯ ಸರ್ಕಾರದ ವೈಪಲ್ಯ ಹಾಗೂ ಪೆಟ್ರೋಲ್, ಡೀಸೆಲ್ ಸೇರಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ನಗರದಲ್ಲಿ ಇಂದು ಕಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಸೈಕಲ್ ತುಳಿದು ಪ್ರತಿಭಟನೆ ನಡೆಸಿದರು
ಬ್ಯಾಳಿ ಕಾಟಾದಿಂದ ಆರಂಭವಾದ ಸೈಕಲ್ ಜಾಥಾಗೆ ರಾಹುಲ್ ಹಾಗೂ ಪ್ರಿಯಾಂಕಾ ಚಾಲನೆ ನೀಡಿದ ನಂತರ ಸೈಕಲ್ ಜಾಥಾ ನಗರದ ವಿವಿಧ ರಸ್ತೆಗಳಲ್ಲಿ ಸಂಚರಿಸಿ, ಸಂಗೊಳ್ಳಿ ರಾಯಣ್ಣ ವೃತ್ತದ ಮಾರ್ಗವಾಗಿ ಬಸವೇಶ್ವರ ವೃತ್ತದಲ್ಲಿ ಮುಕ್ತಾಯವಾಯಿತು.
ಜಾಥಾ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು. ಕೂಡಲೇ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಬೇಕು. ಇಲ್ಲದಿದ್ದರೆ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರಾದ ವಿವೇಕ ಜತ್ತಿ, ರಾಹುಲ್ ಬಡೆಸಗೋಳ, ರೆಹಮಾನ್ ಮೊಕಾಶಿ, ಪ್ರವೀಣ ಗುಡ್ಡಾಕಾಯಿ, ಬಸವರಾಜ ಸಾಯಣ್ಣವರ, ಸುನೀಲ ಅಂಕದವರ, ಕಲ್ಪನಾ ಕರೆನ್ನವರ್, ಯಶೋಧಾ ಬಿರಡಿ, ಶಿವು ಕಿಲಾರಿ, ಬಸವಣ್ಣೆಪ್ಪ ಪರುಶೆಟ್ಟಿ, ಇಮ್ರಾನ್ ತಪಕೀರ್, ರಾಜು ಮೇದಾರ, ಪ್ರಕಾಶ ಬಸಾಪುರೆ, ಮಾರುತಿ ಗುಟಗುದ್ದಿ, ಜುಬೇರ್ ಮಿರ್ಜಾನಾಯ್ಕ್ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.




