ದೀವಾಳಿಯತ್ತ ಹಾಫ್ ಕಾಮ್ಸ್: ಸಿಎಂಗೆ ಪತ್ರ ಬರೆದ ರೈತರು

ರಾಮನಗರ: ರೈತರ ಉತ್ಪನ್ನಗಳಿಗೆ ಬೆಂಗಳೂರು ಹಾಫ್ ಕಾಮ್ಸ್ 6.5 ಕೋಟಿ ರೂ.ಬಾಕಿ ಉಳಿಸಿಕೊಂಡಿದೆ. 3500 ಮಂದಿ ರೈತರಿಗೆ ಬಾಕಿ ಹಣ ಪಾವತಿಸಲಾಗದೆ ಹಾಫ್ ಕಾಮ್ಸ್ ದಿವಾಳಿಯಾಗುತ್ತಿದೆ.
ಬೆಂಗಳೂರು ಹಾಫ್ ಕಾಮ್ಸ್ ರೈತರಿಂದ ಏಲಕ್ಕಿ ಬಾಳೆ, ಹಣ್ಣು-ತರಕಾರಿ, ಕೋಳಿಮೊಟ್ಟೆ, ಸಿರಿಧಾನ್ಯ, ಟೊಮ್ಯೋಟೋ ಸೇರಿದಂತೆ ತಮ್ಮ ಸಂಘದ ವ್ಯಾಪ್ತಿಯಲ್ಲಿ ರೈತರಿಂದ ಖರೀದಿಸಿದೆ. ತಮ್ಮ ಸಂಘ ವ್ಯಾಪ್ತಿಯ ಬಾಕಿಯೇ 6.5 ಕೋಟಿ ರೂ.ಇದೆ. ಇಂದು ನಾಳೆ ಪಾವತಿಸುವುದಾಗಿ ಸಬೂಬು ಹೇಳುತ್ತಿದೆ ಎಂದು ಆರೋಪಿಸಿದರು.
ಇದೀಗ ಸರ್ಕಾರ ಹಾಫ್ ಕಾಮ್ಸ್ ಉಳಿಸಿಕೊಳ್ಳಲು ದೊಡ್ಡಮೊತ್ತದ ಅನುದಾನ ನೀಡಲು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಬರೆದಿರುವ ಮನವಿ ಪತ್ರದಲ್ಲಿ ಉಲ್ಲೇಖವಾಗಿದೆ.
6.5 ಕೋಟಿ ಬಾಕಿ:
25 ಸಾವಿರದ ಒಳಗಿನ ಖರೀದಿದಾರರ ಬಾಬ್ತು 90 ಲಕ್ಷ, 25 ಸಾವಿರಕ್ಕೂ ಮೇಲ್ಟಟ್ಟ ಬಾಕಿ ಬಾಬ್ತು 1 ಕೋಟಿ 40 ಲಕ್ಷ, ಹಣ್ಣುಗಳ ಬಾಬ್ತು 1ಕೋಟಿ 28ಲಕ್ಷ, ಈರುಳ್ಳಿ ಖರೀದಿ ಬಾಬ್ತು 25 ಲಕ್ಷ, ಮೊಟ್ಟೆ ಖರೀದಿ ಬಾಬ್ತು 42 ಲಕ್ಷ, ಸಿರಿಧಾನ್ಯ ಖರೀದಿ ಬಾಬ್ತು 18 ಲಕ್ಷ, ಎಣ್ಣೆ ಖರೀದಿ ಬಾಬ್ತು 16.5 ಲಕ್ಷ, ನೌಕರರಿಗೆ ಸಂಬಳ ಮತ್ತು ಪಿಎಫ್ ಬಾಬ್ತು 1 ಕೋಟಿ 62 ಲಕ್ಷ, ವಾಹನ ಮತ್ತಿತರೆ ಬಾಕಿಗಳು 43 ಲಕ್ಷ ಒಟ್ಟು 6.5 ಕೋಟಿ ರೂ.ಸರಬರಾಜು ಮಾಡಿದ ರೈತರಿಗೆ ಮತ್ತು ಇತರೆ ವೆಚ್ಚಗಳನ್ನು ಪಾವತಿಸದ ಆಡಳಿತ ಮಂಡಳಿ ಕಾರ್ಯವೈಖರಿಯನ್ನು ರೈತರು ಖಂಡಿಸಿದ್ದಾರೆ.
ರೈತರ ಆಕ್ರೋಶ:
ರೈತರಿಂದ ಪಡೆದ ಉತ್ಪನ್ನಗಳ ಮೇಲೆ ಶೇ.25 ಪ್ರಮಾಣದಷ್ಟು ಲಾಭವನ್ನು ನಿಗದಿಪಡಿಸಿ ಮಾರಾಟ ಮಾಡುತ್ತಿದ್ದು, 2 ತಿಂಗಳಿನಿಂದ ಅಲೆಯುವಂತಾಗಿದೆ. ಖರೀದಿಸಿದ ರೈತ ಉತ್ಪನ್ನಗಳಿಗೆ ತಕ್ಷಣದಲ್ಲಿ ಪಾವತಿಸದೆ ಕೊರೊನಾ, ವಾರಾಂತ್ಯದ ಕರ್ಫ್ಯೂ, ಬಂದ್ ಮತ್ತಿತರೆ ಕಾರಣಗಳನ್ನು ನೆಪಮಾಡಿಕೊಂಡು ಬಂಡವಾಳ ಇಲ್ಲದ ಹಾಫ್ ಕಾಮ್ಸ್ ಇಂದು ದಿವಾಳಿ ಹಂತಕ್ಕೆ ತಲುಪಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.




