ಬಾಗಲಕೋಟೆ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಕರವೇ ರಾಜ್ಯ ಮಹಿಳಾ ಉಪಾಧ್ಯಕ್ಷೆ ಅಶ್ವಿನಿಗೌಡ ಬೂಟ್ ಪಾಲಿಷ್ ಅಭಿಯಾನ

ಬಾಗಲಕೋಟೆ: ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರಿಂದ ಬಾಗಲಕೋಟೆಯಲ್ಲಿ ನಡೆದ ಬೂಟ್ ಪಾಲಿಷ್ ಅಭಿಯಾನದಲ್ಲಿ ಕರವೇ ರಾಜ್ಯ ಮಹಿಳಾ ಉಪಾಧ್ಯಕ್ಷೆ ನಟಿ ಅಶ್ವಿನಿಗೌಡ ಸಾರ್ವಜನಿಕರ ಬೂಟ್ ಪಾಲಿಶ್ ಮಾಡಿ ಗಮನ ಸೆಳೆದರು.
ಬಾಗಲಕೋಟೆ ರೈಲ್ವೆ ನಿಲ್ದಾಣದಿಂದ ಆರಂಭವಾದ ಬೂಟ್ ಪಾಲಿಷ್ ಅಭಿಯಾನ ಬಸವೇಶ್ವರ ವೃತ್ತಕ್ಕೆ ಬಂದು ತಲುಪಿತು. ದಾರಿಯುದ್ದಕ್ಕೂ ಬೂಟ್ , ಪಾದರಕ್ಷೆ ಪಾಲಿಷ್ ಮಾಡಿ ದೇಣಿಗೆ ಸಂಗ್ರಹಿಸಿದರು.2014-15ನೇ ಸಾಲಿನಲ್ಲಿ ಬಾಗಲಕೋಟೆ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಆಗಿತ್ತು. ಆದರೆ ಈವರೆಗೂ ಕಾಲೇಜು ಸ್ಥಾಪನೆ ಆಗಿಲ್ಲ. ಶೀಘ್ರವಾಗಿ ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಆಗ್ರಹಿಸಿ ಕರವೇ ಬಾಗಲಕೋಟೆ ಘಟಕದಿಂದ ಜಿಲ್ಲಾಡಳಿತ ಭವನದ ಎದುರು ಈಚೆಗೆ ಬೂಟ್ ಪಾಲಿಷ್ ಅಭಿಯಾನ ಹಮ್ಮಿಕೊಂಡಿತ್ತು.
ಆಗ ಶಾಸಕ ವೀರಣ್ಣ ಚರಂತಿಮಠ ಬೂಟ್ ಪಾಲಿಷ್ ಅಭಿಯಾನ ವ್ಯಂಗ್ಯವಾಡಿದ್ದರು. ಜಿಲ್ಲೆಯಾದ್ಯಂತ ಬೂಟ್ ಪಾಲಿಷ್ ಮಾಡಿದರೇ ಹೆಚ್ಚು ಹಣ ಸಂಗ್ರಹವಾಗುತ್ತದೆ ಎಂದಿದ್ದರು.ಶಾಸಕರ ಸಲಹೆ ಸ್ವೀಕರಿಸಿದ ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ಹಾಗೂ ಕಾರ್ಯಕರ್ತರು ಜಿಲ್ಲೆಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಬೂಟ್ ಪಾಲಿಷ್ ಅಭಿಯಾನ ನಡೆಸುತ್ತಿದೆ. ಮಹಿಳಾ ಘಟಕದ ಅಧ್ಯಕ್ಷರು, ಸದಸ್ಯರ ವಿರುದ್ಧ ಶಾಸಕರು ಕುಮ್ಮಕ್ಕಿನಿಂದ ದೂರು ದಾಖಲಿಸಲು ಪೊಲೀಸರ ನಡೆ ಖಂಡಿಸಿ ಬಾಗಲಕೋಟೆಯಲ್ಲಿಂದು ಕರವೇ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ನಟಿ ಅಶ್ವಿನಿಗೌಡ ಆಹ್ವಾನಿಸಿ ಬೃಹತ್ ಬೂಟ್ ಪಾಲಿಷ್ ಅಭಿಯಾನ ನಡೆಸಿದರು.
ಈ ವೇಳೆ ನಟಿ ಅಶ್ವಿನಿಗೌಡ ಬೂಟ್ , ಪಾದರಕ್ಷೆ ಪಾಲಿಷ್ ಮಾಡಿ ದೇಣಿಗೆ ಸಂಗ್ರಿಹಸಿದರು. ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್,ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ಸೇರಿದಂತೆ ಹಲವು ಮಹಿಳಾ ಕಾರ್ಯಕರ್ತರು ಸಾಥ್ ನೀಡಿದ್ದರು. ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಅಧ್ಯಕ್ಷತೆಯ ಖಾಸಗಿ ಸಂಸ್ಥೆಯ ಮೆಡಿಕಲ್ ಕಾಲೇಜು ಇರುವುದರಿಂದ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಮನಸ್ಸು ತೋರುತ್ತಿಲ್ಲ ಎನ್ನುವ ಆರೋಪ ಕರವೇ ಕಾರ್ಯಕರ್ತರು ಮುಖಂಡರದ್ದಾಗಿದೆ. ಬಾಗಲಕೋಟೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುವವರೆಗೂ ಪಾದರಕ್ಷೆ ಪಾಲಿಷ್ ಅಭಿಯಾನ ಮುಂದುವರೆಯಲಿದೆ ಎಂದು ಕರವೇ ಜಿಲ್ಲಾಧ್ಯಕ್ಷ ರಮೇಶ್ ಬದ್ನೂರ್ ಹೇಳಿದರು.




