ಕಾಶ್ಮೀರದಲ್ಲಿ ಹಾವು ಕಚ್ಚಿ ಮೃತಪಟ್ಟಿದ್ದ ಬಾಗಲಕೋಟೆ ಮೂಲದ ಯೋಧನ ಅಂತ್ಯಕ್ರಿಯೆ

ಬಾಗಲಕೋಟೆ; ಹಾವು ಕಚ್ಚಿ ಜಮ್ಮು ಕಾಶ್ಮೀರದಲ್ಲಿ ಬುಧವಾರ ರಾತ್ರಿ ಮರಣಹೊಂದಿದ್ದ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹಲಕುರ್ಕಿ ಗ್ರಾಮದ ಯೋಧ ಚಿದಾನಂದ ಚನ್ನಬಸಪ್ಪ ಹಲಕುರ್ಕಿ(ಶಿರಸ್ಥಾರ)(25) ಅಂತ್ಯಕ್ರಿಯೆ ಶುಕ್ರವಾರ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
ಮೃತನ ಪಾರ್ಥಿವ ಶರೀರ ಜಮ್ಮು ಕಾಶ್ಮೀರದಿಂದ ಬೆಂಗಳೂರು ಮೂಲಕ ಶುಕ್ರವಾರ ಸ್ವಗ್ರಾಮ ಹಲಕುರ್ಕಿಗೆ ಆಗಮಿಸಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಗ್ರಾಮದ ಹೊರವಲಯದಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಇಂಡಿಯನ್ ಆರ್ಮಿ(ಮರಾಠಾ ರೆಜಿಮೆಂಟ್ ಸೈನಿಕ)ನಾಗಿ ಕಳೆದ 6 ವರ್ಷ 9 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿದ್ದರು.
ಮೃತ ಯೋಧ ಚಿದಾನಂದನಿಗೆ ಒಬ್ಬ ಸಹೋದರ, ತಾಯಿ ರತ್ನಮ್ಮ ತಂದೆ ಚನ್ನಬಸಪ್ಪ ಇದ್ದಾರೆ. ಯೋಧನ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ.
ಯೋಧನ ಅಂತ್ಯಕ್ರಿಯೆಯಲ್ಲಿ ರಾಜ್ಯದ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಾಂತಗೌಡ ಪಾಟೀಲ, ತಹಶೀಲ್ದಾರ್ ಸುಹಾಸ್ ಇಂಗಳೆ, ಭೀಮಸೇನ ಚಿಮ್ಮನಕಟ್ಟಿ, ಸಿಪಿಐ ರಮೇಶ ಹಾನಾಪೂರ, ಪಿ.ಎಸ್.ಐ.ನೇತ್ರಾವತಿ ಪಾಟೀಲ ಸೇರಿದಂತೆ ಗ್ರಾಮದ ಮತ್ತು ಸುತ್ತಮುತ್ತಲಿನ ಗ್ರಾಮದ ಜನರು, ಯುವಕರು, ಗೆಳೆಯರು ಭಾಗವಹಿಸಿ ಅಂತಿಮ ದರ್ಶನ ಪಡೆದರು.




