ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಆರೋಪ: ಒಂದೇ ಕುಟುಂಬದ ಮೂವರ ಕೊಲೆಗೆ ಯತ್ನ

ಮೈಸೂರು: ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಮಹಿಳೆಯ ಸಂಬಂಧಿಕರು ಯುವಕನ ಜೊತೆ ಆತನ ತಂದೆ ತಾಯಿಯನ್ನು ಕೊಲೆ ಮಾಡಲು ಯತ್ನಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಹೆಚ್.ಡಿ.ಕೋಟೆ ತಾಲೂಕಿನ ಜೊಂಪನಹಳ್ಳಿಯ ವಿವಾಹಿತ ಮಹಿಳೆಯ ಜೊತೆ ಶರತ್ ಎಂಬುವವನು ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಎನ್ನಲಾಗ್ತಿದೆ. ಈ ಹಿನ್ನೆಲೆಯಲ್ಲಿ ಯುವತಿಯ ಕಡೆಯವರಾದ ಲೋಹಿತ್ ಹಾಗೂ ಪರಶಿವಮೂರ್ತಿ ಎಂಬುವವರು ಯುವಕರ ಶರತ್ ಸೇರಿದಂತೆ ಆತನ ತಂದೆ ಶಿವಪ್ಪ ಹಾಗೂ ತಾಯಿ ಜ್ಯೋತಿ ಎಂಬುವವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಇದೇ ವಿಚಾರವಾಗಿ ಈ ಹಿಂದೆಯೂ ಲೋಹಿತ್ ಹಾಗೂ ಪರಶಿವಮೂರ್ತಿ ಶರತ್ ಕುಟುಂಬಸ್ಥರ ಜೊತೆ ಒಂದೆರಡು ಬಾರಿ ಗಲಾಟೆ ಮಾಡಿದ್ದರು. ಈ ವೇಳೆ ಪಂಚಾಯಿತಿ ನಡೆಸಿ ಮಹಿಳೆ ಹಾಗೂ ಶರತ್ ಕುಟುಂಬಕ್ಕೆ ಎಚ್ಚರಿಕೆ ನೀಡಲಾಗಿತ್ತು. ಇಷ್ಟಾದರೂ ಯುವತಿ ಹಾಗೂ ಶರತ್ ನಡುವಿನ ಅಕ್ರಮ ಸಂಬಂಧ ಮುದುವರೆದಿತ್ತು.
ಮಹಿಳೆಯ ಸಹವಾಸಕ್ಕೆ ಬರದಂತೆ ಶರತ್ಗೆ ಎಚ್ಚರಿಕೆ ನೀಡಿದ್ದರು. ಇದೇ ವಿಚಾರವಾಗಿ ಕಳೆದ ಭಾನುವಾರ ನ್ಯಾಯಪಂಚಾಯ್ತಿ ನಡೆಸಲು ಮಾತುಕತೆ ನಡೆದಿತ್ತು, ಆದರೆ ಕಾರಣಾಂತರದಿಂದ ನ್ಯಾಯಪಂಚಾಯ್ತಿ ಮುಂದೂಡಲಾಗಿತ್ತು.
ಸಂಬಂಧಿಕರ ಅಂತಿಮ ದರ್ಶನಕ್ಕೆ ಶರತ್, ತಂದೆ ಶಿವಪ್ಪ ಹಾಗೂ ತಾಯಿ ಜ್ಯೋತಿ ಒಂದೇ ಬೈಕ್ನಲ್ಲಿ ತೆರಳುತ್ತಿದ್ದರು. ವಿಷಯ ತಿಳಿದ ಲೋಹಿತ್ ಹಾಗೂ ಪರಶಿವಮೂರ್ತಿ ನಡು ರಸ್ತೆಯಲ್ಲೇ ಯುವಕ ಹಾಗೂ ಆತನ ತಂದೆ, ತಾಯಿಯನ್ನ ಅಡ್ಡ ಹಾಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ.
ಹಲ್ಲೆಗೊಳಗಾದ ಮೂವರು ರಸ್ತೆಯಲ್ಲಿ ಸಹಾಯಕ್ಕಾಗಿ ಕೂಗಾಡಿದ್ದು ಗ್ರಾಮಸ್ಥರು ಬರುತ್ತಿದ್ದಂತೆ ಲೋಹಿತ್ ಹಾಗೂ ಪರಶಿವಮೂರ್ತಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಗಾಯಾಳುಗಳನ್ನು ಹೆಚ್. ಡಿ ಕೋಟೆ ತಾಲೂಕಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಶರತ್ ಶಿವಪ್ಪ ತೀವ್ರವಾಗಿ ಗಾಯಗೊಂಡಿದ್ದಾರೆ. ಜ್ಯೋತಿ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದು, ಘಟನೆ ಸಂಭಂದ ಹೆಚ್. ಡಿ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




