ಉಡುಪಿ: ಮತಾಂತರ ಆರೋಪ ನಾಲ್ವರು ಪೋಲಿಸ್ ವಶಕ್ಕೆ

ಉಡುಪಿ: ಹಲವು ದಿನಗಳಿಂದ ರಾಜ್ಯಾದ್ಯಂತ ಸದ್ದು ಮಾಡುತ್ತಿರುವ ಮತಾಂತರ ಪ್ರಕ್ರಿಯೆ ಇದೀಗ ಜಿಲ್ಲೆಯಲ್ಲಿ ಮತ್ತೆ ಸದ್ದು ಮಾಡಿದೆ. ಇತ್ತೀಚಿಗೆ ಜಿಲ್ಲೆಯಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂದು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಹಲವು ಬಾರಿ ದಾಳಿ ಮಾಡಿ ಸಾಕ್ಷಿ ಸಮೇತವಾಗಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆಂದು ಆರೋಪಿಸಿ ಬಂದ ದೂರಿನ ಹಿನ್ನಲೆಯಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜ್ಯೋತಿ, ಪ್ರಕಾಶ್, ಮನೋಹರ್,ರವಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಶಿರಿಯಾರ ಹಳ್ಳಾಡಿಯಲ್ಲಿ ವರದಿಯಾಗಿದ್ದು ದೂರಿನ ಪ್ರಕಾರ ಆರೋಪಿತರು ಮತಾಂತರಕ್ಕೆ ಯತ್ನಿಸಿದ್ದಾರೆಂದು ತಿಳಿಸಲಾಗಿದೆ.
ಆನಂದ್ ಎಂಬುವವರು ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದು ದೂರಿನಲ್ಲಿ ” ಹಿಂದು ಧರ್ಮದಲ್ಲಿ ಸಾವಿರಾರು ದೇವರುಗಳಿವೆ ಅಲ್ಲದೇ ಹಲವಾರು ಜಾತಿಗಳಿವೇ ನೀವು ಕ್ರಿಶ್ಚಿಯನ ಧರ್ಮಕ್ಕೆ ಬನ್ನಿ ಎಂದು ಹೇಳಿರುವುದಲ್ಲದೇ ಎಲ್ಲರೂ ಸೇರಿ ಹಿಂದು ದೇವರುಗಳೆಲ್ಲವೂ ಮೂಡನಂಬಿಕೆಯ ದೇವರುಗಳು ಎಂಬುದಾಗಿ ಕೆಟ್ಟದಾಗಿ ಹಿಂದು ದೇವರನ್ನು ಬೈದು ತುಚ್ಚವಾಗಿ ಮಾತನಾಡಿ ಕ್ರಿಶ್ಚಿಯನ್ ಧರ್ಮ ಶೇಷ್ಠ ಧರ್ಮ ಎಂದು ಹೇಳಿರುವುದಾಗಿದೆ. ಆರೋಪಿತರು ಎರಡು ಧರ್ಮಗಳ ಮಧ್ಯೆ ದ್ವೇಷವನ್ನುಂಟು ಮಾಡುವ ಮತ್ತು ಸೌರ್ಹಾದತೆಗೆ ಧಕ್ಕೆ ಮಾಡುವ ಕೃತ್ಯಗಳನ್ನು ಮಾಡುವ ಉದ್ದೇಶದಿಂದ ಆಪಾದಿತರು ಮನೆಗೆ ಕರೆದು ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತನನ್ನು ಮತಾಂತರ ಮಾಡಲು ಪ್ರೇರೆಪಿಸಿರುವುದಾಗಿ” ಉಲ್ಲೇಖಿಸಲಾಗಿದೆ.
ಕೋಟಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 175/2021 ಕಲಂ: 153 (A), 295 (A), 298 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.




