ಮಂಗಳೂರು: ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿದ ಅಫ್ಘಾನ್ ಮೂಲದ ವಿದ್ಯಾರ್ಥಿಗಳು

ಮಂಗಳೂರು: ದಕ್ಷಿಣ ಕನ್ನಡದ ವಿವಿಧ ಕಾಲೇಜುಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಆಫ್ಘಾನ್ ಮೂಲದ ವಿದ್ಯಾರ್ಥಿಗಳು ಸದ್ಯ ಅಫ್ಘಾನಿನಲ್ಲಿ ನಡೆಯುತ್ತಿರುವ ಬೆಳವಣಿಗೆ ಬಗ್ಗೆ, ಕುಟುಂಬಗಳ ಸುರಕ್ಷತೆಯ ಬಗ್ಗೆ ಆತಂಕಗೊಂಡಿದ್ದು, ಶನಿವಾರ ಪೊಲೀಸ್ ಆಯಕ್ತರ ಕಚೇರಿಗೆ ಆಗಮಿಸಿದ್ದರು.
ಅಫ್ಘಾನಿನಲ್ಲಿ ತಾಲಿಬಾನ್ ಆಡಳಿತದಿಂದ ಪರಿಸ್ಥಿತಿ ಬದಲಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ತಮಗಾಗಿರುವ ದುಗುಡ, ಆತಂಕವನ್ನು ಪೊಲೀಸ್ ಆಯುಕ್ತರೊಂದಿಗೆ ವ್ಯಕ್ತಪಡಿಸಿದರಲ್ಲದೆ, ತಮ್ಮ ವೀಸಾ ಅವಧಿಯನ್ನು ವಿಸ್ತರಿಸಿಕೊಡುವಂತೆ ಕೇಳಿಕೊಂಡರು.
ಮಂಗಳೂರು ವಿವಿ ಕಾಲೇಜು, ನಿಟ್ಟೆ ವಿದ್ಯಾಸಂಸ್ಥೆ, ಸೆಂಟ್ ಅಲೋಸಿಯಸ್ ಕಾಲೇಜುಗಳಲ್ಲಿ ಅಫ್ಘಾನಿನ ಒಟ್ಟು 58 ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳ ಒಕ್ಕೂಟದಿಂದ ಆಯುಕ್ತರ ಕಚೇರಿಗೆ ತೆರಳಿ ಈ ಬಗ್ಗೆ ಮನವಿ ಸಲ್ಲಿಸಿದರು.
ಅಫ್ಘಾನ್ ವಿದ್ಯಾರ್ಥಿಗಳ ಪೈಕಿ ಈಗಾಗಲೇ 11 ಮಂದಿ ತಮ್ಮ ದೇಶಕ್ಕೆ ತೆರಳಿದ್ದು, ಅವರು ಪರೀಕ್ಷೆಗೆ ಹಾಜರಾಗಲು ಮತ್ತೆ ಮರಳಿ ಬರಬೇಕಾಗಿದೆ. ಅಧ್ಯಯನ ಪೂರ್ಣಗೊಂಡಿರುವ ಕೆಲ ವಿದ್ಯಾರ್ಥಿಗಳ ವೀಸಾ ಅವಧಿ ಸೆಪ್ಟಂಬರ್ಗೆ ಮುಗಿಯಲಿದೆ. ಈ ಎಲ್ಲಾ ವಿದ್ಯಾರ್ಥಿಗಳ ಬೇಡಿಕೆಯ ಮನವಿಯನ್ನು ಪರಿಗಣಿಸಿ, ಸಂಬಂಧಪಟ್ಟವರಿಗೆ ತಲುಪಿಸಲಾಗುವುದು ಪೊಲೀಸ್ ಆಯಕ್ತ ಎನ್ ಶಶಿಕುಮಾರ್ ತಿಳಿಸಿದ್ದಾರೆ.
