Murder: ರಾಡ್ ನಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ

ಕಾರವಾರ : ಶುಕ್ರವಾರ ಬೆಳಗಿನ ಜಾವ ಮನೆಯೊಂದರ ಟೆರೇಸ್ ಮೇಲೆ ವ್ಯಕ್ತಿಯೊಬ್ಬರನ್ನು ರಾಡ್ ನಿಂದ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಂದರು ಗ್ರಾಮ ತದಡಿಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ತದಡಿಯ ವಿವೇಕಾನಂದ (ಬಾಳಾ) ಪುತ್ತು ಶಾನಭಾಗ (74) ಎಂದು ಗುರುತಿಸಲಾಗಿದೆ. ಇವರು ವೃತ್ತಿಯಲ್ಲಿ ವಿದ್ಯುತ್ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದರು. ಕೊಲೆ ಮಾಡಿದ ಆರೋಪಿ ಓರಿಸ್ಸಾ ಮೂಲದ ಆಕಾಶರಾಮ್ (25) ಎಂದು ತಿಳಿದು ಬಂದಿದೆ.ತದಡಿ ಬಂದರಿನ ಎಮ್.ಆರ್. ಎಫ್.ಕಂಪನಿಯ ಮೀನುಗಾರಿಕಾ ಬೋಟ್ ನಲ್ಲಿ ಈತ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಆರೋಪಿ ಕಬ್ಬಿಣದ ರಾಡ್ ನಿಂದ ತಲೆಗೆ ಬಲವಾಗಿ ಹೊಡೆದು ಓಡಿ ಹೋಗಿ ಸಮುದ್ರದಲ್ಲಿ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕರಾವಳಿ ಕಾವಲು ಪಡೆ ಪೊಲೀಸರು ಮತ್ತು ಸ್ಥಳೀಯರು ಆರೋಪಿಯನ್ನು ಹಿಡಿದು ಗೋಕರ್ಣ ಪೊಲೀಸರಿಗೊಪ್ಪಿಸಿದ್ದಾರೆ.
ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಘಟನೆ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




