ಅಪ್ರಾಪ್ತ ಬಾಲಕಿಯನ್ನು ಒತ್ತಾಯವಾಗಿ ಕರೆದೊಯುತ್ತಿದ್ದ ವೇಳೆ ರಕ್ಷಣೆ: ಮಾನವ ಸಾಗಾಟ ಜಾಲದ ಶಂಕೆ

ಕಲಬುರ್ಗಿ : ಜಿಲ್ಲೆಯಲ್ಲಿ ಮಾನವ ಕಳ್ಳಸಾಗಾಣಿಕೆ ಪ್ರಕರಣವೊಂದು ಬಯಲಿಗೆ ಬಂದಿದೆ. 12 ವರ್ಷದ ಬಾಲಕಿಯನ್ನು ಒತ್ತಾಯ ಪೂರ್ವಕವಾಗಿ ಮುಂಬೈಗೆ ಕರೆದೊಯ್ಯುತ್ತಿದ್ದ ವೇಳೆ ಕಲಬುರ್ಗಿ ರೈಲು ನಿಲ್ದಾಣದಲ್ಲಿ ಬಾಲಕಿಯ ರಕ್ಷಣೆ ಮಾಡಲಾಗಿದೆ.
ಮಹಾರಾಷ್ಟ್ರ ಮೂಲದ ವಿವೇಕ್ ಎಂಬಾತ 12 ವರ್ಷದ ಅಪ್ರಾಪ್ತ ಬಾಲಕಿಯನ್ನು ಬೆಂಗಳೂರಿನಿಂದ ಮುಂಬೈಗೆ ಕರೆದೊಯ್ಯುತ್ತಿದ್ದ ವೇಳೆ ಕಲಬುರ್ಗಿ ರೈಲ್ವೆ ನಿಲ್ದಾಣದಲ್ಲಿ ಬಾಲಕಿ ಕಿರುಚಾಡಿ ಸಾರ್ವಜನಿಕರ ಗಮನಕ್ಕೆ ತಂದಿದ್ದಾಳೆ. ಸಾರ್ವಜನಿಕರು ಚೈಲ್ಡ್ ಲೈನ್ ಅಧಿಕಾರಿಗಳ ಗಮನಕ್ಕೆ ತಂದು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ. ಬೆಂಗಳೂರಿನ ಕ್ಯಾಂಟೀನ್ವೊಂದರಲ್ಲಿ ತರಕಾರಿ ಕಟಿಂಗ್ ಕೆಲಸ ಮಾಡುತ್ತಿದ್ದ ಬಾಲಕಿಯನ್ನು, ದೆಹಲಿಯಲ್ಲಿ ಹೆಚ್ಚಿನ ಹಣ ಗಳಿಸಬಹುದು ಅಂತ ಪುಸಲಾಯಿಸಿದ ಆರೋಪಿ ವಿವೇಕ್ ಆಕೆಯನ್ನು ಮುಂಬೈಗೆ ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಅನುಮಾನಗೊಂಡ ಬಾಲಕಿ ಕಲಬುರಗಿ ಸಮಿಪಿಸುತ್ತಿದ್ದಂತೆ ವಿವೇಕ್ ನೊಂದಿಗೆ ಕಿತ್ತಾಡಿ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾಳೆ.
ಬಾಲಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎಂಬ ಆರೋಪದಡಿ ಬಂಧಿಸಲಾದ ಆರೋಪಿ ವಿವೇಕ್, ತಾನು ಆಕೆಯನ್ನು ಒತ್ತಾಯಪೂರ್ವಕವಾಗಿ ಕರೆದುಕೊಂಡು ಹೋಗುತ್ತಿರಲಿಲ್ಲ ಆಕೆ ಮನೆಯವರ ಕೆಲಸ ಕೊಡಿಸು ಅಂತ ಹೇಳಿ ನನ್ನ ಜೊತೆ ಕಳಿಸಿದ್ದಾರೆ. ನಾನು ಆಕೆಯನ್ನು ಕೆಲಸ ಕೊಡಿಸಲು ಮಹಾರಾಷ್ಟ್ರಕ್ಕೆ ಕರೆದುಕೊಂಡು ಹೋಗುತ್ತಿದ್ದೆ ಈಗ ನಾನು ಬರುವುದಿಲ್ಲ ಎಂದು ಹಠ ಮಾಡಿದ್ದಾಳೆ. ಹೀಗಾಗಿ ಆಕೆಯನ್ನು ವಾಪಸ್ ಕರೆದುಕೊಂಡು ಹೋಗಲು ತೀರ್ಮಾನ ಮಾಡಿದ್ದೇನೆ. ಆದರೆ ಈ ಬಾಲಕಿ ನನ್ನೊಂದಿಗೆ ಜಗಳವಾಡಿದ್ದಾಳೆ ನಾನು ಆಕೆಯನ್ನು ಅಕ್ರಮವಾಗಿ ಸಾಗುತ್ತಿರಲಿಲ್ಲ ಅವರ ಮನೆಯವರ ಒಪ್ಪಿಗೆ ಮೇರೆಗೆ ಆಕೆಯನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದ್ದಾನೆ.
ಆದ್ರೆ ಅಧಿಕಾರಿಗಳು ಈ ಪ್ರಕರಣದ ಹಿಂದೆ ಮಾನವ ಸಾಗಾಟದ ದೊಡ್ಡ ಜಾಲ ಇರುವ ಶಂಕೆ ವ್ಯಕ್ತ ಪಡಿಸಿದ್ದಾರೆ. ಆರೋಪಿ ವಿವೇಕ್ ಮಾನವರನ್ನು ಸರಬರಾಜು ಮಾಡುವ ದಲ್ಲಾಳಿ ಇರಬಹುದೆಂದು ರೈಲ್ವೆ ಚೈಲ್ಡ್ ಹೆಲ್ಪ್ ಡೆಸ್ಕ್ ಸಂಯೋಜಕ ಅಶೋಕ ಶಂಕೆ ವ್ಯಕ್ತ ಪಡಿಸಿದ್ದಾರೆ. ಸದ್ಯ ವಿವೇಕ್ ನನ್ನು ವಶಕ್ಕೆ ಪಡೆದ ವಾಡಿ ರೈಲ್ವೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.




