ಅಕ್ರಮ ಕಲ್ಲುಗಣಿಗಾರಿಕೆಯ ಸ್ಫೋಟಕ್ಕೆ ಗೋಡೆಗಳು ಬಿರುಕು: ಭೋವಿ ಸಮಾಜ ಆಕ್ರೋಶ

ದೇವನಹಳ್ಳಿ : ಬಡವರು, ಕೂಲಿ ಕಾರ್ಮಿಕರು ವಾಸ ಮಾಡುವ ಗ್ರಾಮಗಳಲ್ಲಿ ಅಕ್ರಮ ಗಣಿಗಾರಿಕೆ ನಡೆಸಲು ಸರ್ಕಾರ ಬಂಡೆಗಳನ್ನು ಲೀಸ್ ಕೊಡುತ್ತಿದ್ದು ಇದರಿಂದ ಕಷ್ಟಪಟ್ಟು ಕಟ್ಟಿಕೊಂಡಿರುವ ಮನೆಗಳ ಗೋಡೆಗಳಲ್ಲಿ ಬಿರುಕು ಉಂಟಾಗುತ್ತಿದೆ. ಅಕ್ರಮ ಕಲ್ಲುಗಣಿಗಾರಿಕೆ ಯಿಂದ ಮೀಸಗಾನಹಳ್ಳಿಯ ಜನರಿಗೆ ಅನಾನುಕೂಲವಾಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಭೋವಿ ಸಮಾಜದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಮುರಳಿ ಅವರು ಆರೋಪಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಬೀರಸಂದ್ರ ಗ್ರಾಮದ ಜಿಲ್ಲಾಡಳಿತ ಭವನದಲ್ಲಿರುವ ಗಣಿ ಮತ್ತು ಭೂ ವಿಜ್ಞಾನ ಜಿಲ್ಲಾ ಉಪ ನಿರ್ದೇಶಕರ ಕಚೇರಿಗೆ ಮೀಸಗಾನಹಳ್ಳಿ ಗ್ರಾಮಸ್ಥರು ಊರಿನಲ್ಲಿ ಗಣಿಗಾರಿಕೆಯಿಂದ ತುಂಬಾ ತೊಂದರೆಯಾಗುತ್ತಿರುವ ಬಗ್ಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಗ್ರಾಮದ ಮುಖ್ಯ ರಸ್ತೆ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಲ್ಲು ದಿಮ್ಮಿಗಳನ್ನು ಸಾಗಿಸುವ ಹೆವಿ ಟೆನ್ನೆಜ್ ಲೋಡ್ನಿಂದ ಗ್ರಾಮಾಂತರ ಪ್ರದೇಶಗಳಲ್ಲಿನ ರಸ್ತೆಗಳೆಲ್ಲ ಹಾಳಾಗಿದೆ, ಬಂಡೆಗಳನ್ನು ಒಡೆಯಲು ಬಳಸುವ ಸ್ಪೋಟಕದಿಂದ ಉಂಟಾಗುವ ಸ್ಪೋಟದ ಶಬ್ದಕ್ಕೆ ಶಾಲಾ ಮಕ್ಕಳ ಕಲಿಕೆಗೆ ತೊಂದರೆಯಾಗಿದೆ, ದಲಿತರ ಮನೆಗಳು ಬಿರುಕು ಬಿಟ್ಟಿದೆ, ಜನ- ಜಾನುವಾರುಗಳು ಹಾಗೂ ರೈತರ ಬೆಳೆಗಳಿಗೆ ಕಲ್ಲು-ಮಣ್ಣಿನ ಧೂಳು ತುಂಬಿಕೊಂಡು ಬೆಳೆಗಳು ಹಾನಿಯಾಗಿದೆ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.
ಈ ಸಂದರ್ಭದಲ್ಲಿ ತಾಲ್ಲೂಕು ಸಾಂಪ್ರದಾಯಿಕ ಕಲ್ಲುಕುಟಿಕರ ಸಂಘದ ಪದಾಧಿಕಾರಿಗಳಾದ ಸುರೇಶ್, ಮುನಿರಾಜು, ದೊಡ್ಡಪ್ಪಯ್ಯ, ಗಂಗಾಧರ್, ಮಹೇಶ್, ವೇಣುಗೋಪಾಲ್, ವೆಂಕಟೇಶ್, ಮುಂತಾದವರು ಇದ್ದರು.
