ಹಿರಿಯ ನಟ ಕೃಷ್ಣ ವಿಧಿವಶ!

ಹೈದರಾಬಾದ್: ತೆಲುಗು ಚಿತ್ರರಂಗದ ಸೂಪರ್ಸ್ಟಾರ್ ಹಾಗೂ ಹಿರಿಯ ನಟ ಕೃಷ್ಣ ಅವರು ಇಂದು (ನ.15) ಕೊನೆಯುಸಿರೆಳೆದಿದ್ದಾರೆ. ಕೃಷ್ಣ ಅವರು ಪ್ರಖ್ಯಾತ ನಟ ಮಹೇಶ್ ಬಾಬು ಅವರ ತಂದೆ. ಕೆಲವು ದಿನಗಳ ಹಿಂದಷ್ಟೇ ಸಹೋದರ ಮತ್ತು ತಾಯಿಯನ್ನು ಕಳೆದುಕೊಂಡಿದ್ದ ಮಹೇಶ್ ಬಾಬು ಇದೀಗ ತಂದೆಯನ್ನು ಕಳೆದುಕೊಂಡಿದ್ದಾರೆ.
ಕೃಷ್ಣ ಅವರು ಉಸಿರಾಟದ ತೊಂದರೆ ಜೊತೆಗೆ ಬಹು ಅಂಗಾಂಗ ವೈಫಲ್ಯ ಅನುಭವಿಸುತ್ತಿದ್ದರು. ನಿನ್ನೆ ಸಂಜೆ ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ಕೃಷ್ಣ ಅವರು ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.
ಕೃಷ್ಣ ಅವರಿಗೆ 80 ವರ್ಷ ವಯಸ್ಸಾಗಿತ್ತು. ಸುಮಾರು 350ಕ್ಕೂ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವಾರು ಪ್ರಯೋಗಾತ್ಮಕ ಚಿತ್ರಗಳಿಂದ ಕೃಷ್ಣ ಅವರು ಹೆಸರುವಾಸಿಯಾಗಿದ್ದರು. ಪತ್ತೇದಾರಿ, ಐತಿಹಾಸಿಕ, ಪೌರಾಣಿಕ, ಪಾಶ್ಚಾತ್ಯ, ಆಕ್ಷನ್ ಹಾಗೂ ಕೌಬಾಯ್ ಚಲನಚಿತ್ರಗಳು ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಅಭಿನಯಿಸುವ ಮೂಲಕ ಜನಮನ್ನಣೆ ಗಳಿಸಿದ್ದರು.
1965ರಲ್ಲಿ ತೆರೆಕಂಡ ಥೇನೆ ಮನಸುಲು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕೃಷ್ಣ ಅವರು ಅನೇಕ ಗಮನಾರ್ಹ ಪಾತ್ರಗಳು ಮತ್ತು ಚಲನಚಿತ್ರಗಳನ್ನು ಮಾಡಿದದ್ದಾರೆ. ಅಲ್ಲೂರಿ ಸೀತಾರಾಮರಾಜು, ಪಾಂಡಂಟಿ ಕಪುರಂ, ಸಿಂಹಾಸನಂ, ಗುಡಾಚಾರಿ 116, ಜೇಮ್ಸ್ ಬಾಂಡ್ 777 ಹಾಗೂ ಏಜೆಂಟ್ ಗೋಪಿ ಮತ್ತಿತರ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೀಡಿದ್ದಾರೆ.
