ಗೃಹ ಸಚಿವರ ರಾಜೀನಾಮೆಗೆ ವಾಟಾಳ್ ನಾಗರಾಜ್ ಆಗ್ರಹ
ಬೆಂಗಳೂರು: ಕೊಲೆ ಪ್ರಕರಣದ ವಿಚಾರದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಸಣ್ಣ ಮಕ್ಕಳಂತೆ ಹುಡುಗಾಟ ಆಡುತ್ತಿದ್ದಾರೆ. ಸುಳ್ಳು ಮಾಹಿತಿ ನೀಡಿರುವ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖ್ಯಸ್ಥ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಉರ್ದು ಭಾಷೆಯಲ್ಲಿ ಮಾತನಾಡಿಲ್ಲ ಎಂಬ ಕಾರಣಕ್ಕಾಗಿ ಯುವಕನ ಕೊಲೆಯಾಗಿದೆ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದರು. ಬಳಿಕ ತಮ್ಮಿಂದ ತಪ್ಪಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಗುಪ್ತದಳದಿಂದ ಮಾಹಿತಿ ಪಡೆಯದೇ ಜ್ಞಾನೇಂದ್ರ ತಪ್ಪು ಮಾಹಿತಿ ನೀಡಿದ್ದು, ಇದರಲ್ಲಿ ಗುಪ್ತಚರ ಇಲಾಖೆಯ ವೈಫಲ್ಯವೂ ಎದ್ದು ಕಾಣುತ್ತಿದೆ ಎಂದರು.
ಗೃಹ ಸಚಿವರ ಹೇಳಿಕೆಯನ್ನೇ ಇಟ್ಟುಕೊಂಡು ಕನ್ನಡದವರು ಸುಮ್ಮನೆ ಕೂತಿದ್ದೀರಾ ಎಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಮಂದಿ ಕಿಡಿಕಾರಿದ್ದಾರೆ, ಆರಗ ಜ್ಞಾನೇಂದ್ರ ಅವರಿಗೆ ಸಚಿವ ಸ್ಥಾನ ಏಕೆ ಕೊಟ್ಟರು ಎಂಬ ಚರ್ಚೆ ಈಗ ಬೇಡ. ಈಗಲೇ ರಾಜೀನಾಮೆ ನೀಡುವುದು ಒಳ್ಳೆಯದು ಎಂದರು.
ಜ್ಞಾನೇಂದ್ರ ಅವರೇ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ. ನೀವು ರಾಜೀನಾಮೆ ಕೊಟ್ಟರೆ ನಿಮಗೂ ಘನತೆ ಬರುತ್ತದೆ. ಗೃಹ ಸಚಿವರ ಸ್ಥಾನ ಮಾನವೂ ಉಳಿಯುತ್ತದೆ ಎಂದು ವಾಟಾಳ್ ಗುಡುಗಿದ್ದಾರೆ.
